ಚಾಮುಂಡಿ ಬೆಟ್ಟದಲ್ಲಿ ಕಣ್ಣೀರು ಇಟ್ಟ ಸಾ.ರಾ.ಮಹೇಶ್ : ಉಲ್ಟಾ ಹೊಡೆದ ಎಚ್.ವಿಶ್ವನಾಥ್ | Janata news
ಮೈಸೂರು: : ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ನಡುವಿನ ವಾಕ್ಸಮರ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮೆಟ್ಟಲೇರಿದೆ.
ಇಬ್ಬರು ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಚಾಮುಂಡಿ ಬೆಟ್ಟದಲ್ಲಿ ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ನಡುವೆ ಆಣೆ ಪ್ರಮಾಣ ನಡೆಯಿತು.
ಗುರುವಾರ ಬೆಳಿಗ್ಗೆ ಚಾಮಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನರ್ಹ ಶಾಸಕ ವಿಶ್ವನಾಥ್, ತಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ನಾನು ಎಷ್ಟು ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ನಾಡಿನ ಜನರಿಗೆ ಗೊತ್ತಿದೆ. ಇದರ ಬಗ್ಗೆ ತಾಯಿ ಚಾಮುಂಡೇಶ್ವರಿ ಎದುರು ಆಣೆ ಪ್ರಮಾಣ ಮಾಡಿ ತೋರಿಸಿಕೊಡುವ ಅಗತ್ಯ ಇಲ್ಲ. ಹೀಗಾಗಿ ತಾಯಿಯ ದರ್ಶನ ಪಡೆದು ತೆರಳುವುದಾಗಿ ತಿಳಿಸಿದರು. ಈ ಮೂಲಕ ಆಣೆ ಪ್ರಮಾಣದಿಂದ ಹಿಂದೆ ಸರಿದು ಉಲ್ಟಾ ಹೊಡೆದರು.
ನಾನಿಲ್ಲಿ ಬಂದಿರುವುದು ನನ್ನನ್ನು ಖರೀದಿಸಿದವರನ್ನು ನೋಡಲು. ಸಾ.ರಾ ಮಹೇಶ್ ಹೇಳಿದಂತೆ 25 ಕೋಟಿ ಕೊಟ್ಟು ನನ್ನನ್ನು ಖರೀದಿ ಮಾಡಲು ಬಂದವರನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.
ನಂತರ ಬೆಟ್ಟಕ್ಕೆ ಆಗಮಿಸಿದ ಸಾ.ರಾ,ಮಹೇಶ್, ವಿಶ್ವನಾತ್ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ಕ್ಷಮೆಯಾಚಿಸುವೆ. ನಾನು ಯಾರನ್ನೂ ಕರೆದುಕೊಂಡು ಬರುತ್ತೇನೆಂದು ಎಲ್ಲೂ ಹೇಳಿಲ್ಲ ಎಂದ ಅವರು ಮಾಧ್ಯಮದ ಮುಂದೆ ಗಳಗಳನೆ ಅತ್ತರು.
ವೈಯುಕ್ತಿಕ ಟೀಕೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಲಾಗುತ್ತಿದೆ. ಅನರ್ಹ ಶಾಸಕ ಎಚ್.ವಿಶ್ವನಾಥ್ ಮಾಡಿದ ಟೀಕೆಗಳಿಂದ ಮನನೊಂದು ರಾಜೀನಾಮೆ ನೀಡುತಿದ್ದೇನೆ ಎಂದಿದ್ದಾರೆ. ನಾನು ಹೇಳಿದ ಮಾತಿಗೆ ಬದ್ಧನಾಗಿದ್ದೇನೆ ಎಂದು ಸಾರಾ ಮಹೇಶ್ ಸ್ಪಷ್ಟ ಪಡಿಸಿದರು.