ಪಡ್ನವಿಸ್ ಟೀಕೆಗೆ ಪ್ರತ್ಯುತ್ತರ ನೀಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ | Janata news
ಮುಂಬಯಿ : ಅಮಿತ್ ಷಾ ನಮ್ಮ ಮನೆಗೆ ಬಂದಿದ್ದರು ಹಾಗೂ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಬಿಜೆಪಿಯ ದೇವೇಂದ್ರ ಪಡ್ನವಿಸ್ ಅವರ ಪತ್ರಿಕಾಗೋಷ್ಠಿಯ ಕೆಲವೇ ಗಂಟೆಗಳ ಬಳಿಕ ಉದ್ಧವ್ ತಮ್ಮ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಅಲ್ಲದೇ, ತಪ್ಪು ಮೈತ್ರಿ ಮಾಡಿಕೊಂಡಿರುವುದಕ್ಕೆ ಬೇಸರವಿದೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿ ಮಿತ್ರಪಕ್ಷ ಬಿಜೆಪಿ ಜತೆಗಿನ ಹಗ್ಗಜಗ್ಗಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿವಸೇನಾ ಶಾಸಕನನ್ನೇ ಮುಖ್ಯಮಂತ್ರಿ ಮಾಡುವುದಾಗಿ ನಾನು ಜನರಿಗೆ ಮಾತು ಕೊಟ್ಟಿದ್ದೆ. ಬಿಜೆಪಿ ಮತ್ತು ಶಿವಸೇನಾ 25 ವರ್ಷಗಳಿಂದ ಜತೆಯಾಗಿವೆ. ಅಧಿಕಾರದಲ್ಲಿ ಸಮಾನ ಪಾಲು ನಿರೀಕ್ಷಿಸುತ್ತಿರುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿಯೂ ಹೇಳಿದ್ದೆ, ಎಂದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳಿಗೆ ಹಂಚಿಕೊಳ್ಳುವ ಒಪ್ಪಂದ ಆಗಿರಲಿಲ್ಲ ಎಂಬ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮೊದಲ ಬಾರಿಗೆ ಠಾಕ್ರೆ ಕುಟುಂಬವನ್ನು ವ್ಯಕ್ತಿಯೊಬ್ಬರು ಸುಳ್ಳುಗಾರರು ಎಂದು ಕರೆದಿದ್ದಾರೆ, ಎಂದು ಕಿಡಿಕಾರಿದ್ದಾರೆ.