ಯಾರು ಯಾರ ಮನೆಗೆ ಹೋದರೂ, ಫಲಿತಾಂಶ ನೀವೇ ನೋಡಿ - ದಿನೇಶ್ ಗುಂಡೂರಾವ್ | Janata news
ಚಿಕ್ಕಮಗಳೂರು : ಎಚ್.ವಿಶ್ವನಾಥ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.
ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 10 ರಿಂದ 12 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರ ಮನೆಗೆ ಅನರ್ಹ ಶಾಸಕ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಭೇಟಿ ಹಿನ್ನಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಎಚ್. ವಿಶ್ವನಾಥ್ ಜಿ.ಟಿ. ದೇವೇಗೌಡ ಮನೆಗೆ ಭೇಟಿಕೊಟ್ಟ ಹಿನ್ನೆಲೆ ಜಿ.ಟಿ. ದೇವೇಗೌಡ ಇದಕ್ಕೆ ಯಾವ ರೀತಿ ಸ್ಪಂದಿಸಿದ್ದಾರೆ ಯಾರಿಗೆ ಗೊತ್ತು? ಯಾರು ಯಾರ ಮನೆಗೆ ಭೇಟಿ ಕೊಟ್ರೂ, ಫಲಿತಾಂಶವನ್ನು ನೀವೇ ನೋಡಿ.. ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಬಹುಮತದಿಂದ ಗೆಲ್ತಾರೆ, ಕಾಂಗ್ರೆಸ್ ಪಕ್ಷದಲ್ಲಿ ವಿಶ್ವನಾಥ್ ಅವರನ್ನು ಗೌರವದಿಂದ ನೋಡಿಕೊಂಡಿದ್ದೀವಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಶ್ವನಾಥ್ ಜೆಡಿಎಸ್ ಸೇರಿ ಶಾಸಕರಾದರು, ಈಗ ಬಿಜೆಪಿ ಸೇರಿದ್ದಾರೆ, ಅವರಿಗೆ ಯಾವ ಸಿದ್ದಾಂತ, ನೈತಿಕತೆ ಇದೆ..? ಅವರು ಯಾವ ಕಾರಣಕ್ಕೆ ಬಿಜೆಪಿ ಸೇರಿದ್ದಾರೆ ಅನ್ನೋದು ರಾಜ್ಯಕ್ಕೆ ಗೊತ್ತು. ನೈತಿಕತೆ ಇಲ್ಲದವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಟೀಕಿಸಿದರು... ವಿಶ್ವನಾಥ್ ಈ ಮಟ್ಟಕ್ಕೆ ಇಳಿದರಲ್ಲ ಎಂದು ನನಗೆ ತುಂಬಾ ನೋವಾಗುತ್ತೆದೆ ಎಂದು ದಿನೇಶ್ ಹೇಳಿದ್ದಾರೆ.