ಪಶು ವೈದ್ಯೆ ಅತ್ಯಾಚಾರ: ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಹೆಮ್ಮೆಯ ಹುಬ್ಬಳ್ಳಿ ಕನ್ನಡಿಗ ಪೊಲೀಸ್ ಅಧಿಕಾರಿ! | Janata news
ಹೈದರಾಬಾದ್ : ಇಡಿ ದೇಶವನ್ನೇ ತಲ್ಲಣ ಗೊಳಿಸಿದ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ.ಈ ಬಗ್ಗೆ ಹೈದ್ರಾಬಾದ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಪಶುವೈದ್ಯೆ ಹತ್ಯೆಯ ದಿನ ನಡೆದ ಘಟನೆಯ ಮರುಸೃಷ್ಠಿಗೆ ಪೊಲೀಸರು ಮುಂದಾಗಿದ್ದರು. ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಕ್ಕೆ ಮರುಸೃಷ್ಠಿ ಅಗತ್ಯ. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನ ಸ್ಥಳಕ್ಕೆ ಕರೆತಂದಿದ್ರು. ಈ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಷ್ಟೆ ಅಲ್ಲದೆ, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರಿಂದ ಎನ್ಕೌಂಟರ್ ಮಾಡಬೇಕಾಯ್ತು ಅಂತಾ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ತಿಳಿಸಿದ್ದಾರೆ.
ಎನ್ಕೌಂಟರ್ ಮಾಡಿದ ಪೊಲೀಸ್ ಆಯುಕ್ತರು ಕರ್ನಾಟಕದ ಹುಬ್ಬಳ್ಳಿ ಮೂಲದವರು ಎನ್ನುವುದು ವಿಶೇಷ. ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸಜ್ಜನರ್ ಈ ಹಿಂದೆ ವಾರಂಗಲ್ ಆಯಸಿಡ್ ಅಟ್ಯಾಕ್ನ ಆರೋಪಿಗಳ ಶೂಟೌಟ್ನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
2008ರಲ್ಲಿ 3 ಯುವಕರು, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಮೇಲೆ ಆಯಸಿಡ್ ಅಟ್ಯಾಕ್ ಮಾಡಿದ್ದರು. ಘಟನೆ ನಡೆದ ಬಳಿಕ ಆರೋಪಿಗಳನ್ನ ಸ್ಥಳಕ್ಕೆ ಕರೆದೊಯ್ದಿದ್ದ ವೇಳೆ, ಆರೋಪಿಗಳು ಪೊಲೀಸರ ಮೇಲೆಯೇ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಶೂಟ್ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಮೂರು ಜನ ಆರೋಪಿಗಳನ್ನ ಸಜ್ಜನರ್ ಟೀಂ, ಶೂಟೌಟ್ ಮಾಡಿತ್ತು.
ಎನಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರು. ತಂದೆ ಚನ್ನಬಸಪ್ಪ ಬಿ ಸಜ್ಜನ್, ಟ್ಯಾಕ್ಸ್ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಮೂರು ಜನ ಮಕ್ಕಳ ಪೈಕಿ ವಿಶ್ವನಾಥ ಸಜ್ಜನರ್ ಕಿರಿಯರು. ಕಳೆದ ಒಂದೂವರೆ ವರ್ಷಗಳ ಹಿಂದೆ ಇವರು ಸೈಬರಾಬಾದ್ನಲ್ಲಿ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದರು.
ವಿಶ್ವನಾಥ ಸಜ್ಜನರ್, ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದರು. ಬಳಿಕ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಪೂರೈಸಿ, ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಕೌಶಾಳಿಯಲ್ಲಿ ಎಂಬಿಎ ವ್ಯಾಸಂಗ ನಡೆಸಿದ್ದಾರೆ. 1989 MBA ಪದವಿ ಗಳಿಸಿದ ಸಜ್ಜನರ್, 1996 ಯುಪಿಎಸ್ಇ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಬಳಿಕ ಆಂದ್ರ ಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿ.
ಇಂದು ನಡೆದಿರುವ ಎನ್ ಕೌಂಟರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿದ್ದು, ಪೊಲೀಸರ ಈ ಕ್ರಮಕ್ಕೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.