ತಲಕಾಡಿಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಬೆಂಗಳೂರು ವಿದ್ಯಾರ್ಥಿಗಳು ಕಾವೇರಿ ನೀರಿನಲ್ಲಿ ಮುಳುಗಿ ಸಾವು | Janata news
ಮೈಸೂರು : ತಿ.ನರಸೀಪುರ ತಲಕಾಡಿನ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಇಬ್ಬರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಹೆಬ್ಬಾಳದ ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಅಲ್ಫ್ರೆಡ್ ವಿಜಯ್ (16) ಹಾಗೂ ಹೇಮಂತ್ (17) ಎಂದು ಗುರುತಿಸಲಾಗಿದೆ.
ನಿನ್ನೆ ಬೆಂಗಳೂರಿನಿಂದ ನಾಲ್ವರು ಉಪನ್ಯಾಸಕರ ಜೊತೆ 45 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಟಿ.ನರಸೀಪುರ ತಾಲೂಕಿನ ತಲಕಾಡು ಬಳಿಯ ನಿಸರ್ಗಧಾಮಕ್ಕೆ ಬಂದಿದ್ದರು. ಐವರು ವಿದ್ಯಾರ್ಥಿಗಳು ನದಿಯಲ್ಲಿ ಮುಂದೆ ಹೋಗಿ ಸ್ನಾನ ಮಾಡುತ್ತಿದ್ದರು. ಇವರಲ್ಲಿ ಐವರು ವಿದ್ಯಾರ್ಥಿಗಳು ನದಿಯಲ್ಲಿ ಈಜಲು ತೆರಳಿದ್ದಾಗ ಸುಳಿಯ ಸೆಳೆತಕ್ಕೆ ಸಿಲುಕಿದ್ದಾರೆ. ಈ ವೇಳೆ ಅಲ್ಫ್ರೆಡ್, ಹೇಮಂತ್ ಮುಳುಗಿದರು. ಅಲ್ಲಿದ್ದ ಅಂಬಿಗರು ಮೂವರನ್ನು ರಕ್ಷಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.