ಅಂತಾರಾಷ್ಟ್ರೀಯ ಕಬಡ್ಡಿ ಪಟು ಉಷಾರಾಣಿ ಮೇಲೆ ಹಲ್ಲೆ ಆರೋಪ, ಬಿ.ಸಿ ರಮೇಶ್ ಪೊಲೀಸರ ವಶಕ್ಕೆ | Janata news
ಬೆಂಗಳೂರು : ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ. ರಮೇಶ್ ಸೇರಿ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಉಷಾರಾಣಿ ಅವರು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏಷ್ಯನ್ ಗೇಮ್ಸ್ನಲ್ಲಿ ಸಿಲ್ವರ್ ಮೆಡಲ್ ಹಾಗೂ ಸೌತ್ ಏಷಿಯನ್ ಗೇಮ್ಸ್ನಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರುವ ಉಷಾರಾಣಿ ಸಂಪಂಗಿರಾಮನಗರ ಠಾಣೆಯಲ್ಲಿ ಬಿ.ಸಿ. ರಮೇಶ್ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್ 354 ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಮೇಶ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಹಾಗೂ ಸೌತ್ ಏಷಿಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಉಷಾರಾಣಿ ನಿನ್ನೆ ಸಂಜೆ ಕಂಠೀರವ ಸ್ಟೇಡಿಯಂನಲ್ಲಿ ಸಭೆ ಇದ್ದ ಕಾರಣ ಕಬಡ್ಡಿ ಅಸೋಸಿಯೇಶನ್ಗೆ ಹೋಗಿದ್ದಾರೆ.
ಈ ವೇಳೆ ಪ್ರಮುಖರೆಲ್ಲರೂ ಸೇರಿದ್ದಾಗ ಅಸೋಸಿಯೇಶನ್ನಿನ ಬಿ.ಸಿ. ರಮೇಶ್ ಹಾಗೂ ಉಷಾರಾಣಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ರಮೇಶ್ ಹಾಗೂ ಸ್ನೇಹಿತರು, ಉಷಾರಾಣಿ ಮೇಲೆ ಹಲ್ಲೆ ಮಾಡಿದ್ದಾರೆಂದು ಉಷಾರಾಣಿ ದೂರಿನಲ್ಲಿ ತಿಳಿಸಿದ್ದಾರೆ.
ಉಷಾರಾಣಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಪ್ರಭಾವ ಬಳಸಿ ದೂರು ದಾಖಲಿಸಿದ್ದಾರೆ ಅನ್ನೋದು ರಮೇಶ್ ಬೆಂಬಲಿಗರ ಆರೋಪವಾಗಿದೆ.
ಅಸೋಸಿಯೇಷನ್ ಚುನಾವಣೆ ಹಿನ್ನಲೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ವಿನಾಕಾರಣ ಉಷಾರಾಣಿ ಗಲಾಟೆ ಮಾಡಿ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಕರ್ನಾಟಕ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಕನ್ವೇನಿಯರ್ ಶಿವಪ್ಪ ಪ್ರತ್ಯಾರೋಪ ಮಾಡಿದ್ದಾರೆ.