ಸೋತವರಿಗೆ ಸಚಿವ ಸ್ಥಾನದ ಪ್ರಶ್ನೆಯೇ ಇಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ | Janata news
ಬೆಂಗಳೂರು : ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ದಾವೋಸ್ ಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಸ ಮುಗಿಸಿ ರಾಜ್ಯಕ್ಕೆ ಮತ್ತೆ ಆಗಮಿಸುತ್ತಿದ್ದಂತೆ, ಇದೀಗ ಸಚಿವ ಸಂಪುಟ ವಿಸ್ತರಣೆಯ ಸೂಚನೆ ನೀಡಿದ್ದು ಸಚಿವಾಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇನ್ನೂ ಮೂರು ನಾಲ್ಕು ದಿನಗಳಲ್ಲಿಯೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ.
ಇಂದು ಶುಕ್ರವಾರ ಮಧ್ಯಾಹ್ನ ಸುಮಾರು 3.30ಕ್ಕೆ ದಾವೋಸ್ ಪ್ರವಾಸ ಮುಗಿಸಿ ಯಡಿಯೂರಪ್ಪ ಬೆಂಗಳೂರು ತಲುಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ, ಎಂದು ಹೇಳಿದರು.
ಯಡಿಯೂರಪ್ಪ ರಾಜ್ಯಕ್ಕೆ ಮರಳುತ್ತಿದ್ದಂತೆ ಸಂಪುಟ ವಿಸ್ತರಣೆಯ ಚಟುವಟಿಕೆಗಳು ವೇಗ ಪಡೆದುಕೊಳ್ಳುವಂತೆ ಕಂಡುಬಂದಿದೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಹಾಗೂ ಸೋತವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಮೂಲ ಬಿಜೆಪಿ ಶಾಸಕರು ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.
ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಬಗ್ಗೆ ಪ್ರಶ್ನೆಯೇ ಇಲ್ಲ. ಹೀಗಾಗಿ ಅಮಿತ್ ಶಾ ಜೊತೆಗೆ ಮತ್ತೊಮ್ಮ ಚರ್ಚಿಸಿ, ಸಂಪುಟ ವಿಸ್ತರಣೆಯನ್ನು ಮಾಡಲಾಗುತ್ತದೆ, ಎಂದು ತಿಳಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಿಹಿಸುದ್ದಿ ಏನೋ ನೀಡಿದ್ದರೂ, ಸೋತವರಿಗೆ ಶಾಕ್ ನೀಡಿದ್ದಾರೆ.