ಬೆಂಕಿ ತಗುಲಿ ತಂದೆ-ಮಗ ಸಾವು! | Janata news
ಮೈಸೂರು : ಒಲೆ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತಂದೆ-ಮಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಈಶ್ವರ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ತಂದೆ ಮತ್ತು ಮಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರೇ, ಪತ್ನಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಕೆ.ಆರ್.ನಗರದ ಈಶ್ವರ ನಗರದಲ್ಲಿ ವಾಸವಿದ್ದ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸಟೇಬಲ್ ರೇಣುಕಾಸ್ವಾಮಿ(45) ಮತ್ತವರ ಪುತ್ರ ತೇಜಸ್(14) ಎಂದು ಹೇಳಲಾಗಿದೆ.ಹೆಡ್ ಕಾನ್ಸಟೇಬಲ್ ಪತ್ನಿ ಪುಷ್ಪಲತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆಡ್ ಕಾನ್ಸಟೇಬಲ್ ರೇಣುಕಾಸ್ವಾಮಿಯವರು ನೀರು ಕಾಯಿಸಲು ಒಲೆಗೆ ತೆಂಗಿನ ಸಿಪ್ಪೆ ಹಾಕಿ ಬೆಂಕಿ ಹಚ್ಚಿದ್ದರು. ಬೆಂಕಿ ಸರಿಯಾಗಿ ಉರಿಯದ ಕಾರಣ ಪಕ್ಕದಲ್ಲೇ ಇದ್ದ ಸೀಮೆಎಣ್ಣೆ ಕ್ಯಾನ್ ತೆರೆದು ಸ್ವಲ್ಪ ಸೀಮೆಎಣ್ಣೆಯನ್ನು ಒಲೆಗೆ ಎರೆಚಿದ್ದರು.
ಈ ವೇಳೆ ಸೀಮೆ ಎಣ್ಣೆ ಕ್ಯಾನ್ ಗೆ ಬೆಂಕಿ ತಗುಲಿದ್ದು, ಕ್ಯಾನ್ ಉರುಳಿ ಸೀಮೆ ಎಣ್ಣೆಯು ನೆಲದ ಮೇಲೆ ಚೆಲ್ಲಿದ್ದರಿಂದ ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹರಡಿತ್ತು. ಬೆಂಕಿಯನ್ನು ಆರಿಸಲು ಬಂದ ಪುಷ್ಪಲತಾ ಅವರ ಸೀರೆಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಆ ಸಮಯದಲ್ಲಿ ತಾಯಿ ಮತ್ತು ತಂದೆಯನ್ನು ರಕ್ಷಿಸಲು ಬಂದ ಪುತ್ರ ತೇಜಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನೆರೆ ಹೊರೆಯವರು ಬಾಗಿಲು ಒಡೆದು ಒಳಪ್ರವೇಶಿಸಿ ಬೆಂಕಿ ಆರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು.
ಕೆ.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.