ಅಜ್ಜನ ಎದುರೇ ಮೊಮ್ಮಗಳು ಚಿರತೆಗೆ ಬಲಿ: ಚಿರತೆ ಸೆರೆ! | Janata news
ತುಮಕೂರು : ತಾಲೂಕಿನ ಹೆಬ್ಬೂರು ಹೋಬಳಿಯ ಬೈಚೇನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಚಿರತೆಯೊಂದು ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಗಂಗ ಚಿಕ್ಕಣ್ಣ ಎಂಬುವವರ ಮೊಮ್ಮಗಳು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಅಜ್ಜ-ಅಜ್ಜಿಯ ಕಣ್ಣ ಮುಂದೆಯೇ ಮಗುವನ್ನು ಚಿರತೆ ಹೊತ್ತುಕೊಂಡು ಹೋಗಿತ್ತು.
ಚಂದನ ಎಂಬ ಮೂರು ವರ್ಷದ ಮಗು ಅಜ್ಜ-ಅಜ್ಜಿ ಜೊತೆಗೆ ಬೈಚೇನಹಳ್ಳಿ ಗ್ರಾಮದಲ್ಲಿತ್ತು. ಬೆಂಗಳೂರಿನಲ್ಲಿದ್ದ ತಂದೆ ಶ್ರೀನಿವಾಸ, ತಾಯಿ ಶಿಲ್ಪ ಶನಿವಾರ ಮಗಳನ್ನು ನೋಡಲು ಗ್ರಾಮಕ್ಕೆ ಬಂದಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿ, ಚಂದನಾಳನ್ನು ಹೊತ್ತೊಯ್ದು ಕೊಂದು ಹಾಕಿತ್ತು.
ಈಗ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸ್ಥಳಾಂತರಿಸುವ ಕಾರ್ಯ ನಡೆಸಿದ್ದಾರೆ.