ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಕಲ್ಯಾಣ! | Janata news
ಬೆಂಗಳೂರು : ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಜ್ಯೇಷ್ಠ ಪುತ್ರಿ ರಕ್ಷಿತಾ ಮತ್ತು ಹೈದರಾಬಾದ್ ಮೂಲದ ರವಿಕುಮಾರ್ ಪುತ್ರ ಲಲಿತ್ ಸಂಜೀವ್ ರೆಡ್ಡಿ ಅವರ ವಿವಾಹ ಗುರುವಾರ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಮೇಲುಕೋಟೆ ಕಲ್ಯಾಣಿ ಪರಿಕಲ್ಪನೆಯಲ್ಲಿ ಜಗಮಗಿಸುವ ಮಂಟಪ ಸಿದ್ಧಗೊಳಿಸಲಾಗಿದೆ.
ನಗರದ ಅರಮನೆ ಮೈದಾನದಲ್ಲಿ (ವಸಂತನಗರ ಗೇಟ್) ನಡೆಯುವ ವಿವಾಹಕ್ಕೆ ಅತಿಥಿಗಳು ಆಗಮಿಸಿದ್ದು, ಬೆಳಗ್ಗೆ 7ರಿಂದ 9 ಗಂಟೆಯೊಳಗಿನ ಶುಭಲಗ್ನದಲ್ಲಿ ರಕ್ಷಿತಾ ಮತ್ತು ಲಲಿತ್ ಸಂಜೀವ್ ರೆಡ್ಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಬಸವರಾಜಬೊಮ್ಮಾಯಿ, ವಿ.ಸೋಮಣ್ಣ, ಕೆ.ಗೋಪಾಲಯ್ಯ ಸೇರಿದಂತೆ ಮತ್ತಿತರರು ವಧು-ವರರನ್ನು ಆಶೀರ್ವದಿದರು.
ಚಲನಚಿತ್ರ ತಾರೆಯರು, ಉದ್ಯಮಿಗಳು ಸೇರಿದಂತೆ ಇತರೆ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಮದುವೆಗಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ.
40 ಎಕರೆಯಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣಗೊಂಡಿದೆ. ಮುಹೂರ್ತ ಮಂಟಪದಲ್ಲಿ ನಾಲ್ಕು ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಏಳು ಸಾವಿರ ಮಂದಿ ಒಂದೇ ಬಾರಿ ಊಟ ಮಾಡಬಹುದಾಗಿದೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಂದರ್ಭದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಿದ್ದಾರೆ. ಉದ್ಯಮಿ ಅಂಬಾನಿ ಮಗನ ಮದುವೆ ಫೋಟೋ, ವಿಡಿಯೋ ತೆಗೆದ ಜಯರಾಮನ್ ಪಿಳ್ಳೈ ಜೊತೆ ದಿಲೀಪ್ ಅವರು ಶ್ರೀರಾಮುಲು ಪುತ್ರಿಯ ಮುದುವೆ ಫುಲ್ ವಿಡಿಯೋ ಚಿತ್ರೀಕರಿಸಿದ್ದಾರೆ.