ರಾಜ್ಯದಲ್ಲಿರುವ ಕ್ಲಬ್, ಥಿಯೇಟರ್, ಮಾಲ್, ಶಾಲೆ -ಕಾಲೇಜು ಬಂದ್: ಸರಕಾರದಿಂದ ಮಹತ್ವದ ಆದೇಶ | Janata news
ಬೆಂಗಳೂರು : ಕೊರೊನಾ ವೈರಸ್ ಭೀತಿಯ ನಡುವೆ ರಾಜ್ಯ ಸರಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಒಂದು ವಾರಗಳ ಕಾಲ ರಾಜ್ಯದಲ್ಲಿರುವ ಎಲ್ಲಾ ಕ್ಲಬ್, ಮಾಲ್, ಸಿನಿಮಾ ಮಂದಿರ, ಶಾಲಾ - ಕಾಲೇಜುಗಳನ್ನು ಮುಚ್ಚಲು ಸರಕಾರ ಆದೇಶಿಸಿದೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ಮಾಲ್, ಚಿತ್ರ ಮಂದಿರ, ಮದುವೆ, ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿವಿಗಳು ಬಂದ್ ಆಗಲಿದ್ದು, ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.
ಎಲ್ಲೆಡೆ ಕೊರೊನಾ ಹಬ್ಬುತ್ತಿರುವ ಭಯ ಜನರನ್ನು ಆವರಿಸಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಜ್ಞರ ಜೊತೆ ಶುಕ್ರವಾರ ಎರಡು ಸುತ್ತಿನ ಸಭೆ ನಡೆಸಿದರು. ನಂತರ ಸಿಎಂ ಯಡಿಯೂರಪ್ಪ ಈ ಆದೇಶ ಹೊರಡಿಸಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗದಿಯಂತೆಯೇ ಪರೀಕ್ಷೆಗಳು ನಡೆಯಲಿವೆ ಎಂದು ಸಿಎಂ ತಿಳಿಸಿದ್ದಾರೆ.
ಐಟಿ ಯವರಿಗೆ ವರ್ಕ್ ಫ್ರಂ ಹೋಮ್ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಅಧಿವೇಶನ ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕೊರೊನಾ ಪರಿಣಾಮ ಮುಖ್ಯಮಂತ್ರಿಗಳೂ ತಮ್ಮ ಪ್ರವಾಸವನ್ನು ರದ್ದು ಮಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ಸಿಎಂ ಬೆಳಗಾವಿ ಜಿಲ್ಲಾ ಪ್ರವಾಸ ಮಾಡಬೇಕಾಗಿತ್ತು. ನನ್ನ ಪ್ರವಾಸ ಕೂಡ ರದ್ದು ಮಾಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.