ಜೀವ ಮತ್ತು ಭದ್ರತೆಯ ಬೆದರಿಕೆ : ಡಿಜಿಪಿ ಗೆ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕರ ಪತ್ರ | Janata news
ಬೆಂಗಳೂರು : ತಮ್ಮ ಜೀವ ಮತ್ತು ಭದ್ರತೆಗೆ ಯಾವುದೇ ಬೆದರಿಕೆಯಾಗದಂತೆ ಖಚಿತಪಡಿಸಿಕೊಳ್ಳಲು ಯಾವುದೇ ಕಾಂಗ್ರೆಸ್ ಮುಖಂಡರು / ಸದಸ್ಯರಿಗೆ ತಮ್ಮನ್ನು ಭೇಟಿಯಾಗಲು ಅವಕಾಶ ನೀಡಬಾರದು, ಎಂದು ಪ್ರಸ್ತುತ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್ ನ 22 ಬಂಡಾಯ ಶಾಸಕರು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ವಿನಂತಿಸಿದ್ದಾರೆ ಎಂದು ಎಏನ್ಐ ಹೇಳಿದೆ.
ಈ ಮೂಲಕ ಪದೇಪದೇ ತಮ್ಮನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಮುಖಂಡರಿಂದ ತಮಗೆ ಜೀವ ಮತ್ತು ಭದ್ರತೆಯ ಬೆದರಿಕೆ ಇದೆ ಎಂದು ಪರೋಕ್ಷವಾಗಿ ಹೇಳಿರುವ ಮಧ್ಯಪ್ರದೇಶ ಕಾಂಗ್ರೆಸ್ ನ 22 ಬಂಡಾಯ ಶಾಸಕರು, ಕಾಂಗ್ರೆಸ್ ಮುಖಂಡರು / ಸದಸ್ಯರಿಗೆ ಭೇಟಿಯಾಗಲು ತಾವು ಇಚ್ಚಿಸುವುದಿಲ್ಲ ಎನ್ನುವುದನ್ನು ಬಹಿರಂಗ ಪಡಿಸಿದಂತಾಗಿದೆ.
ಇಂದು ಬೆಳಿಗ್ಗೆ ಕಾಂಗ್ರೆಸ್ ನ ರಾಜ್ಯಸಭಾ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ತಂಗಿದ್ದ ಮಧ್ಯಪ್ರದೇಶ ಕಾಂಗ್ರೆಸ್ ನ 22 ಬಂಡಾಯ ಶಾಸಕರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು.
ಈ ಕುರಿತು ಮಾತನಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ದಿಗ್ವಿಜಯ ಜಿ ನಮ್ಮ ರಾಜ್ಯಸಭಾ ಅಭ್ಯರ್ಥಿ, ಅವರು ಶಾಸಕರನ್ನು ಭೇಟಿ ಮಾಡಲು ಹೋದರು ಆದರೆ ಅವರಿಗೆ ಭದ್ರತಾ ಅಪಾಯವಿದೆ ಎಂದು ತಿಳಿಸಲಾಯಿತು. 500 ಕರ್ನಾಟಕ ಪೊಲೀಸ್ ಸಿಬ್ಬಂದಿಯ ಮಧ್ಯೆ ಅವರು ಭದ್ರತಾ ಅಪಾಯಕ್ಕೆ ಸಿಲುಕಿದ್ದಾರೆ? ಇದು ಶಾಸಕರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ ಮತ್ತು ಬಿಜೆಪಿ ಸರ್ಕಾರವನ್ನು ಅವರನ್ನು ಅಪಹರಿಸಲು ಪ್ರಯತ್ನಿಸುತ್ತಿದೆ ಎಂದು ತೋರಿಸುತ್ತದೆ, ಎಂದು ಹೇಳಿದ್ದಾರೆ.