ಬಲವಂತದಿಂದ ತ್ಯಾಜ್ಯ ಡಂಪ್ ವಿವಾದ: ಇಂದು ಸಜೀಪ ಬಂದ್ | Janata news
ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕಪದವುನಲ್ಲಿ ಮಾ. 18ರಂದು ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ನಡೆಸುವ ವೇಳೆ ನಡೆದ ಬೆಳವಣಿಗೆಯನ್ನು ಖಂಡಿಸಿ ಗುರುವಾರ ಸಜೀಪ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ.
ಸಜಿಪ ನಡು ಗ್ರಾಮದ ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆ ಮತ್ತು ಜಿಲ್ಲಾಡಳಿತ ಬಲವಂತವಾಗಿ ತ್ಯಾಜ್ಯ ಡಂಪ್ ಮಾಡಿದೆ ಎಂದು ಖಂಡಿಸಿ ಗುರುವಾರ ಗ್ರಾಮಸ್ಥರು, ವ್ಯಾಪಾರಸ್ಥರು ಗ್ರಾಮದ ಎಲ್ಲಾ ಅಂಗಡಿಗಳ ಬಾಗಿಲು ತೆರೆಯದೆ ಹಾಗೂ ಆಟೊ ರಿಕ್ಷಾ ಚಾಲಕರು ಪಾರ್ಕ್ ಗೆ ಇಳಿಯದೆ ಸ್ವಯಂ ಬಂದ್ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಸ ವಿಲೇವಾರಿ ನಡೆಸುವುದನ್ನು ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಪೊಲೀಸರ ದೌರ್ಜನ್ಯ ಪ್ರದರ್ಶಿಸಿದ್ದಾರೆ ಹಾಗೂ ಕಸ ವಿಲೇವಾರಿಯ ವಿಚಾರದಲ್ಲಿ ಪುರಸಭೆಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಜೀಪನಡು ಗ್ರಾಮಸ್ಥರು ಸಜೀಪ ಬಂದ್ ಗೆ ಕರೆ ನೀಡಿದ್ದರು.
ಘಟನೆ :-
ಒಂದು ದಶಕದ ಹಿಂದೆ ನಿರ್ಮಾಣವಾಗಿದ್ದ ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆಗೆ ಗ್ರಾಮ ಪಂಚಾಯತ್ ಆಡಳಿತ ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಕಂಚಿನಡ್ಕಪದವು ಘಟಕದಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವ ಕುರಿತು ಕೆಲವು ದಿನಗಳಿಂದ ಸ್ಥಳೀಯರು ಹಾಗೂ ಬಂಟ್ವಾಳ ಪುರಸಭೆಯ ಮಧ್ಯೆ ಪರ - ವಿರೋಧದ ಮಾತುಗಳು ಕೇಳಿಬರುತ್ತಿದ್ದವು.
ಇತ್ತೀಚಿಗೆ ಪುರಸಭಾ ಆಡಳಿತಾಧಿಕಾರಿಯೂ ಆದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಕೂಡಲೇ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ತ್ಯಾಜ್ಯ ತುಂಬಿ ಬಂದ ಲಾರಿಯನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸ್ ಬಲವನ್ನು ಬಳಸಿದ ಪುರಸಭೆ ತ್ಯಾಜ್ಯವನ್ನು ಡಂಪ್ ಮಾಡಿದೆ.
ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ ಸೋಜಾ, ಸಿಐ ಟಿ.ಡಿ.ನಾಗರಾಜ್, ಗ್ರಾಮಾಂತರ ಎಸ್ಐ ಪ್ರಸನ್ನ ಅವರು ಗ್ರಾಮಸ್ಥರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟರು.
ಇದನ್ನು ವಿರೋಧಿಸಿ ಗುರುವಾರ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಗ್ರಾಮದಲ್ಲಿ ಬಂದ್ ಗೆ ಕರೆ ನೀಡಿದ್ದರು.