ತಿಹಾರ್ ಜೈಲಿನಲ್ಲಿ ನಿರ್ಭಯಾ ಹಂತಕರಿಗೆ ಗಲ್ಲು! ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? | Janata news
ನವದೆಹಲಿ: : ಬರೋಬ್ಬರಿ ಏಳು ವರ್ಷಗಳ ಬಳಿಕ ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಾಲ್ವರೂ ಅಪರಾಧಿಗಳನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ.
ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಗಲ್ಲುಶಿಕ್ಷೆ ಖಾಯಂ ಆದ ಬಳಿಕ ನಾಲ್ವರೂ ಹಂತಕರನ್ನು ಬೆಳಗಿನ ಜಾವ 3:30ಕ್ಕೆ ಎಬ್ಬಿಸಲಾಯಿತು. ಸ್ನಾನ ಮಾಡಲು ಒಲ್ಲೆ ಎಂದ ನಾಲ್ವರಿಗೂ ತಿನ್ನಲು ಏನು ಬೇಕೆಂದು ಕೇಳಿದಾಗ ನಾಲ್ವರೂ ತಿನ್ನಲು ನಿರಾಕರಿಸಿದರು. ಬೆಳಗ್ಗೆ ಸರಿಯಾಗಿ 05:30ಕ್ಕೆ ನಾಲ್ವರು ಅಪರಾಧಿಗಳಾದ ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಮುಖೇಶ್ ಸಿಂಗ್ ಹಾಗೂ ಪವನ್ ಗುಪ್ತಾ ನೇಣುಗಂಬವೇರಿದರು.
ಹಂತಕರಿಗೆ ಗಲ್ಲುಶಿಕ್ಷೆ ನೀಡಲಾಗಿದೆ ಎಂದು ಘೋಷಿಸುತ್ತಿದ್ದಂತೇ ಜಲಿನ ಮುಂಭಾಗದಲ್ಲಿ ಇದೇ ಸುದ್ದಿಗಾಗಿ ಕಾಯುತ್ತಿದ್ದ ಸಾವಿರಾರು ಜನ ಕುಣಿದು ಕುಪ್ಪಳಿಸಿದರು. ಮಗಳನ್ನು ನೆನೆದು ನಿರ್ಭಯಾ ಪೋಷಕರೂ ಕೂಡ ಕಣ್ಣೀರಾದರು. ನಿರ್ಭಯಾ ಚಿರಾಯು, ಭಾರತ ಮಾತೆಗೆ ಜೈ ಎಂದು ಘೋಷಣೆಗಳು ಮೊಳಗಿವೆ. ಈ ಮೂಲಕ 7 ವರ್ಷಗಳ ನಿರ್ಭಯಾ ಹೆತ್ತವರ ಹೋರಾಟಕ್ಕೆ ಫಲ ಸಿಕ್ಕಿದೆ.