ರಾಜ್ಯದಲ್ಲೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಿದೆ ಸೋಂಕು ನಿವಾರಕ ಸುರಂಗ! | Janata news
ಹುಬ್ಬಳ್ಳಿ : ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ ( ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ( ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದೆ, ರಾಜ್ಯದಲ್ಲಿಯೇ ಇದೊಂದು ಮೊದಲ ವಿನೂತನ ಪ್ರಯತ್ನವಾಗಿದೆ.
ಹುಬ್ಬಳ್ಳಿಯ ಅಮರಗೋಳದ ಎಪಿಎಮ್ಸಿ ಆವರಣದಲ್ಲಿ ಡಿಸ್ಇನ್ಫೆಕ್ಷನ್ ಟನಲ್ ಅಳವಡಿಸಲಾಗಿದೆ. ಮಾರುಕಟ್ಟೆಗೆ ಬರುವವರು ಸುರಂಗದ ಮೂಲಕ ಹಾದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವೇಳೆ ಜನರ ಮೇಲೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಣೆಯಾಗುತ್ತೆ. ಇದರಿಂದ ವೈರಾಣು ಹರಡಂತೆ ತಡೆಗಟ್ಟಲು ಸಾಧ್ಯವಾಗಲಿದೆ.
ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ಬೆಳಿಗ್ಗೆ ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ.
ಈ ಸುರಂಗದೊಳಗೆ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ವ್ಯಕ್ತಿ ಧರಿಸಿದ ಬಟ್ಟೆ ಒದ್ದೆಯಾಗದ ರೀತಿ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ.
ಈ ದ್ರಾವಣ ಜನರ ಬಟ್ಟೆ ಮತ್ತು ದೇಹದ ಮೇಲಿರುವವ ವೈರಸ್ ನಾಶಪಡಿಸಲಿದೆ. ಡಾ. ಶ್ರೀನಿವಾಸ ಜೋಶಿ ಮತ್ತು ವಿಎಸ್ವಿ ಪ್ರಸಾದ್ ನೇತ್ರತ್ವದ ತಂಡ ಈ ಮಷಿನ್ ಸಿದ್ಧಪಡಿಸಲು ಶ್ರಮಿಸಿದೆ.