ಹಲ್ಲೆಯಲ್ಲಿ ಚೆಕ್ ಪೋಸ್ಟ್ ಕರ್ತವ್ಯ ನಿರತ ಎಎಸ್ಐ ಕೈ ಕಟ್ : ಶಸ್ತ್ರ ಚಿಕಿತ್ಸೆಯಿಂದ ಯಶಸ್ವಿ ಜೋಡಣೆ | Janata news
ಚಂಡೀಗಡ : ಕೊರೊನಾ ಸಂಕ್ರಾಮಿಕ ವಿರುದ್ಧ ಹೋರಾಟದ ಕರ್ತವ್ಯ ನಿರ್ವಹಿಸುತ್ತಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಅವರ ಕತ್ತರಿಸಿದ್ದ ಕೈಯನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್) ಸಹಾಯಕ ಸಬ್ ಇನ್ಸ್ಪೆಕ್ಟರ್ ಹರ್ಜೀತ್ ಸಿಂಗ್ ಅವರ ಏಳೂವರೆ ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ದುಷ್ಕರ್ಮಿಗಳ ಗುಂಪೊಂದು ಚೆಕ್ ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೆ ಮುನ್ನುಗ್ಗಲು ಯತ್ನಿಸಿದ್ದು, ಅದನ್ನು ತಡೆಹಿಡಿದ ಪಂಜಾಬ್ ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿದೆ. ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಎಎಸ್ಐ ಹರ್ಜೀತ್ ಸಿಂಗ್ ಮೇಲೆ ಖಡ್ಗದಿಂದ ಹಲ್ಲೆ ಮಾಡಲಾಗಿದೆ. ಈ ದಾಳಿಯಲ್ಲಿ ಎಎಸ್ಐ ಹರ್ಜೀತ್ ಸಿಂಗ್ ಅವರ ಎಡಗೈ ಸಂಪೂರ್ಣ ತುಂಡಾಗಿ ಹಾರಿಹೋಗಿತ್ತು.
ಬಳಿಕ, ತಮ್ಮ ಬಲಗೈಯಲ್ಲಿ ಕತ್ತಿಯಿಂದ ಕತ್ತರಿಸಲ್ಪಟ್ಟ ಎಡಗೈಯನ್ನು ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಹರ್ಜೀತ್ ಸಿಂಗ್ ಆಸ್ಪತ್ರೆಗೆ ಹೋಗಿದ್ದರು. ಈ ದಾಳಿಗೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.