ಲಾಕ್ಡೌನ್ನಿಂದಾಗಿ ಹಂಪಿಯಲ್ಲಿ ಸಿಲುಕಿದ ಹಿರಿಯ ನಟಿ ಜಯಂತಿ! | Janata news
ಹಂಪಿ : ಲಾಕ್ಡೌನ್ನಲ್ಲಿ ಕಳೆದ 22 ದಿನಗಳಿಂದ ನಟಿ ಜಯಂತಿ ಸಿಲುಕಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಮತ್ತು ಅವರ ಪುತ್ರ ಕೃಷ್ಣಕುಮಾರ್ ಹಂಪಿಯ ಹೋಟೆಲ್ ಒಂದರಲ್ಲಿ ಸಿಲುಕಿಕೊಂಡಿದ್ದಾರೆ.
ಕಳೆದ ಮಾರ್ಚ್ 22 ರಂದು ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತ ಜಯಂತಿ ಹಂಪಿಯ ಪ್ರವಾಸಕ್ಕೆಂದು ತೆರಳಿದ್ದರು. ಮಾ.24 ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸುತ್ತಿದ್ದಂತೆಯೇ ಅವರಿಗೆ ವಾಪಸ್ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ.
ಹೊಸಪೇಟೆಯಲ್ಲಿರುವ ಖಾಸಗಿ ಹೊಟೇಲ್ವೊಂದರಲ್ಲಿ ಜಯಂತಿ ಹಾಗೂ ಕುಟುಂಬ ಉಳಿದುಕೊಂಡಿದ್ದರು. ಅಲ್ಲಿಗೆ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಏ.14ರವರೆಗೂ ಕಾದು, ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೃಷ್ಣ ಕುಮಾರ್ ನಿರ್ಧರಿಸಿದ್ದರು. ಆದರೆ ಮತ್ತೆ ಲಾಕ್ಡೌನ್ ಅವಧಿ ವಿಸ್ತರಣೆ ಆಗಿರುವುದರಿಂದ ಅಲ್ಲಿಯೇ ಉಳಿದುಕೊಳ್ಳುವುದು ಅನಿವಾರ್ಯ ಆಗಿದೆ.
ಪ್ರಸ್ತುತ ಹಂಪಿ ಪ್ರವಾಸಿ ಮಂದಿರದಲ್ಲೇ ಜಯಂತಿ ಮತ್ತು ಕೃಷ್ಣಕುಮಾರ್ ಉಳಿದುಕೊಂಡಿದ್ದಾರೆ.
ಕೃಷ್ಣಕುಮಾರ್ ಮಾತನಾಡಿ, ನಾವು ಕ್ಷೇಮವಾಗಿದ್ದೇವೆ. ಅಧಿಕಾರಿಗಳು ಮತ್ತು ವೈದ್ಯರು ಬಂದು ವಿಚಾರಿಸಿ ಹೋಗಿದ್ದಾರೆ. ಸಾರ್ವಜನಿಕವಾಗಿ ಆಗಬೇಕಾದ ತುರ್ತು ಕೆಲಸಗಳು ತುಂಬ ಇವೆ. ಮೊದಲು ಅವುಗಳು ನೆರವೇರಲಿ. ಒಂದು ವೇಳೆ ತುಂಬ ಕಷ್ಟ ಆಗುತ್ತಿದೆ ಎಂಬ ಸಂದರ್ಭ ಎದುರಾದರೆ ನಾವೇ ಸಹಾಯ ಕೋರುತ್ತೇವೆ ಎಂದಿದ್ದಾರೆ.