ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ | Janata news
ಬೆಂಗಳೂರು : ಕೇಂದ್ರ ಸರಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ ಯಾರು ಯಾರಿಗೆ ಮಾರುತ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಮಾಹಿತಿ ಇದೆ, ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಗೋಪಾಲಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನಾನು ಸಚಿವ ಗೋಪಾಲಯ್ಯರಿಗಿಂತ ಮೊದಲೇ ಸಚಿವನಾಗಿದ್ದವನು. ಈ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆಂದು ಚೆನ್ನಾಗಿ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಗೋಪಾಲಯ್ಯ ಅವರಿಗೆ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥವನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂಥ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿ ಇಟ್ಟುಕೊಂಡಿದ್ದು ಯಾಕೆ, ಸರ್ಕಾರ ನೂರಾರು ಗೋದಾಮು, ಛತ್ರಗಳನ್ನು ಪಡೆದು ಅವುಗಳನ್ನು ದಿನಸಿ ಪದಾರ್ಥ ಸಂಗ್ರಹಕ್ಕೆ ಬಳಸಲಾಗುವುದು ಎಂದು ಘೋಷಿಸಿದ್ದೇಕೆ, ಅಷ್ಟು ಕಟ್ಟಡಗಳಲ್ಲಿ ಸಂಗ್ರಹಿಸಲು ಅವಕಾಶ ಇರುವಾಗ ಇಲ್ಲಿ, ಖಾಸಗಿ ಜಾಗದಲ್ಲಿ ಬಚ್ಚಿಟ್ಟುಕೊಂಡಿದ್ದೇಕೆ ಎಂದು ಅವರು ಪ್ರಶ್ನಿಸಿದರು.
ಎಷ್ಟು ಅಧಿಕಾರಿಗಳ ಜತೆ ಏನೇನು ಮಾತುಕತೆ ಆಗಿದೆ, ಸರ್ಕಾರದ ಅಕ್ಕಿಯನ್ನು ಯಾರು ಎಲ್ಲಿ ಎಷ್ಟಕ್ಕೆ ಖರೀದಿಸಿದ್ದಾರೆ ಎಂಬುದೂ ನನಗೆ ಗೊತ್ತಿದೆ. ಈಗ ಜನರ ಆರೋಗ್ಯ ಕಾಪಾಡಿ, ಅವರ ಜೀವಗಳನ್ನು ಉಳಿಸೋಣ. ಜೀವ ಇದ್ದರೆ ನಂತರ ಉಳಿದದ್ದು. ಹೀಗಾಗಿ, ಈಗ ಆರೋಗ್ಯ ವಿಚಾರವಾಗಿ ಮಾತ್ರ ಚರ್ಚೆ ಮಾಡೋಣ ಎಂದು ಡಿಕೆಶಿ ಹೇಳಿದರು.