ಕಾಂಗ್ರೆಸ್ ಕೊಟ್ಟ 1 ಕೋಟಿ ರೂ. ಚೆಕ್ ನಕಲಿ: ಆರ್ ಅಶೋಕ್ ಗಂಭೀರ ಆರೋಪ | Janata news
ಬೆಂಗಳೂರು : ಖಾತೆ ಬದಲಾಯಿಸುವ ಜ್ಞಾನ ಇಲ್ಲದವರು ನಮಗೆ ಸರಕಾರ ಹೇಗೆ ನಡೆಸಬೇಕೆಂದು ಪಾಠ ಮಾಡುತ್ತಾರೆ ಎಂದು, ಕೆಪಿಸಿಸಿ ಮುಖಂಡರ ಬಗ್ಗೆ ಸಚಿವರು ಲೇವಡಿ ಮಾಡಿದ್ದಾರೆ.
ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಲೆಟರ್, ಚೆಕ್ ಮೇಲೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಹಿ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರ ದುಪ್ಪಟ್ಟು ದರ ನಿಗದಿ ಮಾಡಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್, ಮೆಜೆಸ್ಟಿಕ್ಗೆ ಲಗ್ಗೆ ಇಟ್ಟು ಕಾರ್ಮಿಕರನ್ನು ಸಂತೈಹಿಸುವ ಕೆಲಸ ಮಾಡಿತು. ಅಲ್ಲದೇ ಕಾರ್ಮಿಕರಿಗೆ ಉಚಿತವಾಗಿ ಹೋಗಲು ಒಂದು ಕೋಟಿ ರೂ. ಚೆಕ್ ಸಹ ನೀಡಿ ಗಮನಸೆಳೆದಿತ್ತು. ದುಡ್ಡು ಬೇಕಿದ್ದರೆ ಕೇಳಿ, ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.
ಎಂ.ಡಿ, ಕೆಎಸ್ಆರ್ ಟಿಸಿ ಹೆಸರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್, ಒಂದು ಕೋಟಿ ರೂಪಾಯಿಯ ಚೆಕ್ ಅನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಚೇರಿಗೆ ಕಳುಹಿಸಿತ್ತು. ಈ ಚೆಕ್ ನಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಹಿಯಿತ್ತು. ಆದರೆ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಲೆಟರ್ ಹೆಡ್ ಇದೆ. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಎಂದು ಸಚಿವ ಅಶೋಕ್, ಡಿಕೆಶಿಯವರ ವಿರುದ್ದ ಗುಡುಗಿದ್ದಾರೆ.