ಗರ್ಭಿಣಿಯಿಂದ 3 ಜಿಲ್ಲೆಗಳಲ್ಲಿ ಆತಂಕ: 12 ಮಂದಿಗೆ ಕೊರೊನಾ, ಗ್ರಾಮದ 128 ಮಂದಿ ಕ್ವಾರಂಟೈನ್ | Janata news
ಬಾಗಲಕೋಟೆ : ಗರ್ಭಿಣಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದವರು. ಇಲ್ಲಿ ಇಂದು ಒಂದೇ ದಿನ 13 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇವರೆಲ್ಲರೂ ಸೋಂಕಿತ ಗರ್ಭಿಣಿಯ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 48ಕ್ಕೆ ಏರಿದೆ.
23 ವರ್ಷದ ಗರ್ಭಿಣಿ ರೋಗಿ 607 ಸಂಪರ್ಕದಲ್ಲಿದ್ದ ಡಾಣಕಶಿರೂರು ಗ್ರಾಮದ 12 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದ ಊಟಕ್ಕೆ ಗ್ರಾಮದ ಅನೇಕ ಕುಟುಂಬಗಳು ಬಂದಿದ್ದವು. ಹೀಗಾಗಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಗರ್ಭಿಣಿಯ ತವರು ಮನೆ ಗದಗದ ಕೃಷ್ಣಾಪುರ ಗ್ರಾಮದಲ್ಲೂ ಕರೊನಾ ಭಯ ಪ್ರಾರಂಭವಾಗಿದೆ. ಗರ್ಭಿಣಿ ಏ.27ರಂದು ಬಾಗಲಕೋಟೆಯ ಢಾಣಕಶಿರೂರ ಗ್ರಾಮದಿಂದ ತನ್ನ ತವರುಮನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮಕ್ಕೆ ಹೋಗಿದ್ದರು. ಏ.28ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು.
ಕೂಡಲೇ ರೋಣದ ಒಂದು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಾಗದು ಎಂದು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲೂ ಗರ್ಭಿಣಿಗೆ ಚಿಕಿತ್ಸೆ ನೀಡುವುದು ಕಷ್ಟವಾದಾಗ ಹುಬ್ಬಳ್ಳಿಯ ಕಿಮ್ಸ್ಗೆ ಸೇರಿಸಲಾಯಿತು.
ಗರ್ಭಿಣಿಗೆ ಸೋಂಕು ದೃಢಪಟ್ಟ ಬಳಿಕ ಡಾಣಕಶಿರೂರು ಗ್ರಾಮದ 128 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಷ್ಟೂ ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇದೀಗ 12 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಲಾಗಿದೆ.