ಬುದ್ಧನ ತತ್ವ, ಸಂದೇಶ ಇಂದಿನ ಸಂಕಷ್ಟದ ಪರಿಸ್ಥಿತಿಗೆ ಭಾರತಕ್ಕೆ ದಾರಿದೀಪ: ನರೇಂದ್ರ ಮೋದಿ | Janata news
ನವದೆಹಲಿ: : ಇಂದು ಬುದ್ಧ ಪೂರ್ಣಿಮಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನರಿಗೆ ಬುದ್ಧ ಪೂರ್ಣಿಮಾದ ಶುಭಾಶಯಗಳನ್ನು ಕೋರಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಬುದ್ಧನ ಅನುಯಾಯಿಗಳು ಮಾನವೀಯತೆಯಿಂದ ಸೇವೆ ಮಾಡುವವರು. ಈ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುವ ಅಗತ್ಯವಿದೆ. ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನಮನ ಸಲ್ಲಿಸಿದರು.
ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸ್ವಾರ್ಥವಿಲ್ಲದೆ ವಿಶ್ವದ ಜತೆಗೆ ನಿಂತಿದೆ. ಇಡೀ ಜಗತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಗವಾನ್ ಬುದ್ಧನ ತತ್ವ, ಸಂದೇಶ, ಬೋಧನೆಗಳು ಪ್ರಸ್ತುತವಾಗಿದ್ದು ಅದರಂತೆ ನಡೆಯಬೇಕಾಗಿದೆ.
ಬುದ್ಧ ಕೇವಲ ಹೆಸರಲ್ಲ. ಪಾವಿತ್ರ್ಯತೆಯ ಪ್ರತಿರೂಪ. ಬದಲಾವಣೆಗೆ ತನ್ನನ್ನೇ ಸಮರ್ಪಿಸಿಕೊಂಡವರು. ಬುದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ. ಸಂಕಟ, ಸಂಕಷ್ಟದ ಪರಿಸ್ಥಿತಿಯಲ್ಲಿ ಬುದ್ದನ ನೆನೆಪಿಸಿಕೊಂಡರೆ ಎಂತಹದ್ದೇ ಕಠಿಣ ಪರಿಸ್ಥಿತಿಯಿಂದ ಹೊರಬರಬಹುದು. ಈ ಕೊರೊನಾ ಕಷ್ಟದ ಸಂದರ್ಭದಲ್ಲೂ ಬುದ್ದನ ನೆನೆದು ಒಗ್ಗಟ್ಟಿನ ಹೋರಾಟ ಮುಂದುವರಿಸೋಣ ಎಂದರು.
ಭಾರತದ ಸಂಸ್ಕೃತಿ ಯಾವಾಗಲೂ ವಿಶ್ವಕ್ಕೆ ಮಾರ್ಗದರ್ಶಿ. ಈ ಸಂಕಷ್ಟ ಕಾಲಕ್ಕೆ ಬುದ್ಧನ 4 ಮಾತುಗಳು ಪ್ರಸ್ತುತ. ದಯೆ ಕರುಣೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಬುದ್ಧ ಹೇಳಿದ್ದಾನೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿರುವವರಿಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಹಾಯ ಮಾಡಿ ಎಂದು ಮೋದಿ ಜನತೆಗೆ ಮನವಿ ಮಾಡಿದರು.