ಮಹಾರಾಷ್ಟ್ರ ಜೈಲಿಂದ ಶೇ.50 ಕೈದಿಗಳಿಗೆ ಬಿಡುಗಡೆ ನಿರ್ಧಾರ! | Janata news
ಮುಂಬೈ : ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜೈಲುಗಳಲ್ಲಿರುವ ಶೇ.50 ರಷ್ಟುಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದೆ.
ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರವನ್ನು ಅನುಸರಿಸುವುದು ಅತ್ಯಗತ್ಯ. ಹೀಗಾಗಿ, 17,000 ಕೈದಿಗಳನ್ನು ಮನೆಗೆ ಕಳುಹಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರದ ಆರ್ಥರ್ ರೋಡ್ ನಲ್ಲಿರುವ ಜೈಲಿನಲ್ಲಿ 185 ಮಂದಿ ಕೈದಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮುಂಬೈನಲ್ಲಿರುವ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಮಹಿಳಾ ಕೈದಿಗಳಲ್ಲಿ ಸೋಂಕು ಕಾಣಿಸಿಕೊಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೈದಿಗಳನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಮೋಕಾ, ಟಾಡಾ, ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಅಪರಾಧಗಳ ಮೇಲೆ ಶಿಕ್ಷೆಗೊಳಗಾದ ಕೈದಿಗಳನ್ನು ಹೊರತುಪಡಿಸಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿರುವ ಕೈದಿಗಳಿಗೆ ಮಾತ್ರ ತಾತ್ಕಾಲಿಕ ಜಾಮೀನು ಅಥವಾ ಪೆರೋಲ್ ನೀಡಲಾಗುತ್ತದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಎಎ ಸಯ್ಯದ್ ಅವರ ನೇತೃತ್ವದ ತಂಡ ಕೈದಿಗಳ ಬಿಡುಗಡೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ತಯಾರಿಸಿದೆ. ಇದರಂತೆ ಕೋಕಾ, ಎಂಪಿಐಡಿ, ಯುಎಪಿಎ, ಪಿಎಂಎಲ್ಎ ಕಾಯಿದೆಗಳಡಿ ಜೈಲಿನಲ್ಲಿರುವ ಅಪರಾಧಿ ಅಥವಾ ಆರೋಪಿಗಳಿಗೆ ಈ ಬಿಡುಗಡೆ ಭಾಗ್ಯ ಸಿಗುವುದಿಲ್ಲ. ಇವರು ಜೈಲಿನಿಂದ ಹೊರ ಬರಬೇಕಾದರೆ ಈ ಹಿಂದಿನಂತೆಯೇ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜಾಮೀನು ಪಡೆಯಬೇಕಾಗುತ್ತದೆ.