ಶೇ.100ರಷ್ಟು ಹಣ ಮರುಪಾವತಿಗೆ ನಾನು ಸಿದ್ಧ, ದಯವಿಟ್ಟು ನನ್ನ ಸಾಲದ ಹಣ ತೆಗೆದುಕೊಳ್ಳಿ : ಮತ್ತೊಮ್ಮೆ ಸರಕಾರಕ್ಕೆ ಮಲ್ಯ ಮನವಿ | Janata news
ಲಂಡನ್ : ಭಾರತದ ವಿವಿಧ ಬ್ಯಾಂಕುಗಳಲ್ಲಿ ನಾನು ಮಾಡಿರುವ ಶೇ.100 ರಷ್ಟು ಹಣವನ್ನು ಹಿಂದಿರುಗಿಸಲು ನಾನು ಸಿದ್ದನಿದ್ದೇನೆ ದಯವಿಟ್ಟು ಈ ಹಣವನ್ನು ಪಡೆದುಕೊಳ್ಳಿ ಹಾಗೂ ನನ್ನ ಮೇಲಿನ ಪ್ರಕರಣವನ್ನು ಕೈಬಿಡಿ ಎಂದು ಮದ್ಯದ ದೊರೆ ವಿಜಯಮಲ್ಯ ಮತ್ತೊಮ್ಮೆ ಭಾರತದ ಸರ್ಕಾರದ ಎದುರು ಮನವಿ ಸಲ್ಲಿಸಿದ್ದಾರೆ.
ಭಾರತ ಸರಕಾರದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ನ್ನು ಸ್ವಾಗತಿಸಿರುವ ಅವರು, ತಮ್ಮ ಬಾಕಿ ಸಾಲವನ್ನು ಮರು ಪಾವತಿಸಲು ಪದೇ ಪದೇ ನೀಡಿರುವ ಕೊಡುಗೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕೋವಿಡ್-19 ಪರಿಹಾರ ಪ್ಯಾಕೇಜ್ಗಾಗಿ ಸರಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ನಗದನ್ನು ಮುದ್ರಿಸಬಹುದು. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ಸಾಲದ ಶೇ. 100 ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ? ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗಿ ಭಾರತದಿಂದ ಲಂಡನ್ಗೆ ಪಲಾಯನ ಮಾಡಿ ತಲೆ ಮರೆಸಿಕೊಂಡಿರುವ ಕಿಂಗ್ಫಿಶರ್ ಏರ್ಲೈನ್ಸ್ ಮಾಲೀಕ ವಿಜಯ ಮಲ್ಯ, ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ಹೋಗಿ ಎಂದು ಈವರೆಗೆ ಹಲವಾರು ಬಾರಿ ಭಾರತ ಸರ್ಕಾರದ ಎದುರು ಮನವಿ ಮಾಡಿದ್ದಾರೆ.