ಸಾವರ್ಕರ್ ಹೆಸರು ತೆಗೆದು ಹಾಕಿ, ವಿರೋಧಕ್ಕೆ ಮಣಿಯಿತೇ ಸರ್ಕಾರ? | Janata news
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉದ್ಘಾಟಿಸಬೇಕಿದ್ದ, ಬೆಂಗಳೂರಿನ ಯಲಹಂಕದ ಡೈರಿ ವೃತ್ತ ಬಳಿ ನಿರ್ಮಿಸಲಾದ ಮೇಲ್ಸೇತುವೆಗೆ ವೀರ ಸಾವರ್ಕರ್ ನಾಮಕರಣ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.
ಇಂದು ಗುರುವಾರ ಸ್ವಾತಂತ್ಯ್ರ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಯಲಹಂಕದ ಡೈರಿ ವೃತ್ತ ಬಳಿ ನಿರ್ಮಿಸಲಾದ ಹೊಸ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ಟು ಉದ್ಘಾಟನೆ ಮಾಡಲು ಮೊದಲು ನಿರ್ಧಾರ ಮಾಡಲಾಗಿತ್ತು.
ಸರ್ಕಾರದ ಈ ನಿರ್ಧಾರ ಹೊರ ಬಿಳುತ್ತಿದ್ದಂತೆ ಪ್ರತಿಪಕ್ಷಗಳಾದ ಜೆಡಿಎಸ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಮುಖಂಡರು, ಈ ಹಂತದಲ್ಲಿ ಉದ್ಘಾಟನೆ ಬೇಕಿರಲಿಲ್ಲ, ಕೂಡಲೇ ನಿರ್ಧಾರ ಕೈ ಬಿಡಬೇಕು, ಎಂದು ಒತ್ತಾಯಿಸಿದ್ದರು.
ಇದಾದ ಬಳಿಕ ವಿರೋಧಗಳ ಒತ್ತಡಕ್ಕೆ ಮಣಿದಂತೆ ರಾಜ್ಯ ಸರ್ಕಾರ ಕಂಡುಬಂದಿದ್ದು, ಈ ಮೊದಲು ಆಹ್ವಾನ ಪತ್ರಿಕೆಯಲ್ಲಿ ನಮುದಿಸಲಾಗಿದ್ದ, ವೀರ ಸಾವರ್ಕರ್ ಮೇಲುಸೇತುವೆ ಉದ್ಘಾಟನಾ ಕಾರ್ಯಕ್ರಮ ದ ಬದಲು, ಸಾವರ್ಕರ್ ಮತ್ತು ಕಾರ್ಯಕ್ರಮ ತೆಗೆದು ಹಾಕಿ ಕೇವಲ, ಮೇಲ್ಸೇತುವೆ ಉದ್ಘಾಟನೆ, ಎಂದು ಮುದ್ರಿಸಲಾಯಿತು.
ಆದರೆ, ಸರ್ಕಾರದ ಈ ಯು ಟರ್ನ್ ನಿರ್ಧಾರವನ್ನು ಪಕ್ಷದ ಮೂಲ ಬೆಂಬಲಿಗರೇ ವಿರೋಧಿಸುವುದು ಕಂಡು ಬಂದಿದ್ದು, ಆಕ್ರೋಶಕ್ಕೆ ಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಕುರಿತು ಬೇಸರ ವ್ಯಕ್ತಪಡಿಸಿ ನಿರ್ಧಾರವನ್ನು ಖಂಡಿಸಿದ್ದಾರೆ.
ಸದ್ಯಕ್ಕೆ ಟೀಕೆಗಳಿಂದ ತಪ್ಪಿಸಿಕೊಳ್ಳುವಂತೆ, ಕೊರೊನಾ ನೆಪದಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನೇ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೂ ಕೆಲವು ಅಭಿಮಾನಿಗಳು ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಮೇಲುಸೇತುವೆ ಎಂದು ತಾವೇ ರಸ್ತೆ ಮೇಲೆ ಬರೆಯುವ ಮೂಲಕ ನಾಮಕರಣಕ್ಕೆ ಮುಂದಾಗಿದ್ದಾರೆ.