ತ್ರಿಕೋನ ಪ್ರೇಮ ಪ್ರಕರಣ: ಮಾಜಿ ಪ್ರೀಯಕರನಿಂದಲೇ ಹಲ್ಲೆಗೀಡಾಗಿದ್ದ ಯುವತಿ ಸಾವು! | Janata news
ಬೆಂಗಳೂರು : ತ್ರಿಕೋನ ಪ್ರೇಮದಲ್ಲಿ ಮಾಜಿ ಪ್ರಿಯಕರನಿಂದ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಮೋನಿಕ (23) ಸಾವನ್ನಪ್ಪಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋನಿಕ ಕೊನೆಯುಸಿರೆಳೆದಿದ್ದಾರೆ.
23 ವರ್ಷದ ಮೋನಿಕಾ ಬೆಂಗಳೂರಿನ ಸಿಡೆದಹಳ್ಳಿ ನಿವಾಸಿ, ಸೋಲದೇವನಹಳ್ಳಿ ರಸ್ತೆಯ ಆಚಾರ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಐದು ವರ್ಷದ ಹಿಂದೆ ಚಿಕ್ಕಬಾಣಾವಾರದ ನಿವಾಸಿ ಬಬೀತ್ ಜೊತೆ ಪ್ರೇಮಾಂಕುರವಾಗಿದೆ. ಆದರೆ, ಮೋನಿಕಗೆ ಇತ್ತೀಚೆಗೆ ಬಬಿತ್ ಸ್ನೇಹಿತ ರಾಹುಲ್ ಜೊತೆ ಪ್ರೀತಿ ಶುರುವಾಗಿದೆ.
ಕಳೆದ ಆರು ತಿಂಗಳಿನಿಂದ ರಾಹುಲ್ ಜೊತೆ ಮೋನಿಕ ಓಡಾಡಿಕೊಂಡಿದ್ದಳು. ಮೋನಿಕ ಭಾನುವಾರ ಸಂಜೆ ರಾಹುಲ್ ಮನೆಗೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಮೋನಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿ ಸಾಲದ್ದು ಅಂತ ಬಬಿತ್ ಮನೆಗೆ ಮೋನಿಕಾಳನ್ನು ಕರೆತಂದು ಅಲ್ಲಿಯು ಸಹ ಮನಸೋಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಬಳಿಕ ಮೋನಿಕ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ. ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನಲಾಗಿದೆ.