ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ರಾಷ್ಟ್ರಕ್ಕೆ ಸ್ಪಷ್ಟ ಚಿತ್ರಣ ನೀಡುವಂತೆ ಕೇಂದ್ರಕ್ಕೆ ಎಚ್ಡಿಡಿ ಮನವಿ! | Janata news
ಬೆಂಗಳೂರು : ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತಾಗಿ ಸ್ಪಷ್ಟ ಮಾಹಿತಿಯನ್ನು ರಾಷ್ಟ್ರದ ಜನರಿಗೆ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಭಾರತ-ಚೀನಾ ಲಡಾಕ್ನ ಗಲ್ವಾನ್ ವ್ಯಾಲಿ ಗಡಿ ಪ್ರದೇಶದಲ್ಲಿ ಸಂಘರ್ಷ ನಡೆದಿದ್ದು, ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಿಂದಾಗಿ ಭಾರತೀಯ ಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಪರಿಣಾಮ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಗಡಿ ಸಂಘರ್ಷದಲ್ಲಿ ನಮ್ಮ ಸೈನಿಕರು ಹೇಗೆ ತಮ್ಮ ಪ್ರಾಣವನ್ನು ಕಳೆದುಕೊಂಡರು? ಎಂಬುವುದನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಬೇಕಿದೆ. ಎರಡು ದೇಶಗಳ ನಡುವಿನ ಗಡಿ ಸಂಘರ್ಷದ ಕುರಿತಾಗಿ ದೇಶದ ಜನರಿಗೆ ಸ್ಪಷ್ಟವಾದ ಮಾಹಿತಿಯನ್ನು ಸರ್ಕಾರ ನೀಡಬೇಕು.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಗಲ್ವಾನ್ ವ್ಯಾಲಿಯಿಂದ ಬರುತ್ತಿರುವ ಸುದ್ದಿಗಳು ಗೊಂದಲಮಯವಾಗಿವೆ. ಗಡಿ ವಿವಾದದ ಕುರಿತು ಇನ್ನೂ ಮಾತು ಕಥೆ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳಬೇಕೆ? ದೇಶದ ಹಿತಾಸಕ್ತಿಯಿಂದಾಗಿ, ಪ್ರಧಾನಮಂತ್ರಿ ಮತ್ತು ರಕ್ಷಣಾಮಂತ್ರಿಯವರು ಗಡಿಯಲ್ಲಿ ಚೀನಾದ ಜೊತೆಗಿನ ಗಡಿವಿವಾದದ ಕುರಿತು ಸ್ಪಷ್ಟ ಚಿತ್ರಣವನ್ನು ದೇಶದ ಮುಂದಿಡಬೇಕು ಎಂದು ಮನವಿ ಮಾಡಿದ್ದಾರೆ.