ಬೆಂಗಳೂರಲ್ಲಿ ಪತ್ನಿ ಕೊಲೆ, ಕೊಲ್ಕತ್ತಾಗೆ ತೆರಳಿ ಅತ್ತೆಯನ್ನ ಕೊಂದು ತಾನೂ ಆತ್ಮಹತ್ಯೆ! | Janata news
ಬೆಂಗಳೂರು : ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಬಳಿಕ ತಾನೂ ಆತ್ಮಹತ್ತೆಗೆ ಶರಣಾಗಿರೋ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಮಿತ್ ಅಗರ್ವಾಲ್ (42) ತನ್ನ ಪತ್ನಿ ಶಿಲ್ಪಿ ಧಂಧಾನಿಯಾ ಅವರನ್ನು ಬೆಂಗಳೂರಿನ ವೈಟ್ಫೀಲ್ಡ್ ನ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ನಂತರ ಕೋಲ್ಕತ್ತಾಗೆ ಹೋಗಿ ಅತ್ತೆ ಲಲಿತ ಧಂಧಾನಿಯಾ ಅವರನ್ನು ಶೂಟ್ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಮಿತ್ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಅದ್ರಲ್ಲಿ ತಾನು ಬೆಂಗಳೂರಿನಲ್ಲಿ ಪತ್ನಿಯನ್ನ ಕೊಲೆ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾನೆ. ಕೂಡಲೇ ಕೊಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಹದೇವಪುರ ಪೊಲೀಸರು ಅಪಾರ್ಟ್ಮೆಂಟ್ಗೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಅಡುಗೆ ಕೋಣೆಯಲ್ಲಿ ಮಹಿಳೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಅಮಿತ್ ಮತ್ತು ಶಿಲ್ಪಿ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ವೈವಾಹಿಕ ಜೀವನದಲ್ಲಿ ಜಗಳವಾಗಿ ವಿಚ್ಛೇದನ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದರು. ಈ ವೇಳೆ ಪತ್ನಿ ಶಿಲ್ಪಿಯನ್ನು ( 40) ಉಸಿರು ಗಟ್ಟಿಸಿ ಸಾಯಿಸಿದ ಅಮಿತ್ ಭಾನುವಾರ ಕೋಲ್ಕತಾದಲ್ಲಿರುವ ಅತ್ತೆ ಮನೆಗೆ ಹೋಗಿದ್ದ.
ಪತ್ನಿಯನ್ನು ಸೋಮವಾರ ಬೆಳಗ್ಗೆ ಕೊಲೆ ಮಾಡಿದ ಅಗರ್ವಾಲ್, ಸಂಜೆ 5.30ರ ಸುಮಾರಿಗೆ ಕೋಲ್ಕತ್ತಾದ ಫೂಲ್ಬಾಗನ್ ಪ್ರದೇಶದ ತಮ್ಮ ಅತ್ತೆ-ಮಾವನ ಫ್ಲ್ಯಾಟ್ಗೆ ಬಂದು ಅತ್ತೆ ಮಾವನ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕೆ ತಿರುಗಿ ಅಮಿತ್ ಗನ್ ತೆಗೆದು ಅತ್ತೆ ಲಲಿತಾ ಅವರಿಗೆ ಶೂಟ್ ಮಾಡಿದ್ದಾನೆ. ಮನೆಯಲ್ಲೇ ಇದ್ದ ಮಾವ ಹೊರೆಗೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಇದಾದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಅಮಿತ್ ಮತ್ತು ಶಿಲ್ಪಿ ದಂಪತಿಗೆ 10 ವರ್ಷದ ಒಬ್ಬ ಮಗನೂ ಇದ್ದು, ಆತ ಈಗ ತಬ್ಬಲಿಯಾಗಿದ್ದಾನೆ.