ಸಾ.ರಾ.ಮಹೇಶ್ ನನ್ನ ಸಮನಲ್ಲ, ಪ್ರತಿಸ್ಪರ್ಧಿಯೂ ಅಲ್ಲ: ವಿಶ್ವನಾಥ್ | Janata news
ಮೈಸೂರು : ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದೆ ಇಲ್ಲ ಎಂದು ವಿಧಾನ ಪರಿಷತ್ ಗೆ ನೂತನವಾಗಿ ನಾಮ ನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್ ಅವರು ಶಾಸಕ ಸಾ.ರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ನಾಮನಿರ್ದೇಶನದ ಬಗ್ಗೆ ಕಾನೂನಿನ ತೊಡಕಿದ್ದರೆ ಅದಕ್ಕೆ ರಾಜ್ಯಪಾಲರು ಉತ್ತರ ಕೊಡುತ್ತಾರೆ. ಈ ಕುರಿತು ರಾಜ್ಯಪಾಲರಿಗೆ ಸಾ.ರಾ.ಮಹೇಶ್ ಪತ್ರ ಬರೆದಿರುವುದರಿಂದ ನನಗೆ ಏನೂ ಸಮಸ್ಯೆ ಆಗಲ್ಲ ಎಂದು ತಿಳಿಸಿದರು.
ವಿರೋಧ ಪಕ್ಷಗಳಿಗೆ ಬರೀ ವಿರೋಧ ಮಾಡೋದು ಮಾತ್ರವೇ ಗೊತ್ತು. ಅವರು ಅಧಿಕಾರದಲ್ಲಿದ್ದಾಗ ರಾತ್ರಿ ವೇಳೆಯೂ ಸೂರ್ಯ ಚಂದ್ರ ಕಾಣುತ್ತಾರೆ. ಆದರೆ ಅವರು ಅಧಿಕಾರದಲ್ಲಿಲ್ಲ ಎಂದರೆ ಅದೇಕೋ ರಾತ್ರಿ ವೇಳೆ ಸೂರ್ಯ ಕಾಣುತ್ತಿಲ್ಲ ಎನ್ನುತ್ತಾರೆ ಎಂದರು.
ವಿರೋಧ ಪಕ್ಷದವರಿಗೆ ಸರ್ಕಾರದ ಸಾಧನೆ ಅಥವಾ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುವುದು ಗೊತ್ತಿಲ್ಲ. ಬಿಜೆಪಿ ಸರ್ಕಾರ ಒಂದು ವರ್ಷದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ? ಆ ಒಂದು ಕೆಲಸವನ್ನಾದರೂ ಒಳ್ಳೆಯದು ಅಂತ ಹೇಳಲಿ. ಅದನ್ನು ಬಿಟ್ಟು ಎಲ್ಲವನ್ನೂ ಟೀಕೆ ಮಾಡೋದು ಸರಿಯಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ಮುಚ್ಚಿಹಾಕಿದೆ ಎಂದು ವಿಶ್ವನಾಥ್ ಹೇಳಿದರು.