ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ: ಸಿದ್ದರಾಮಯ್ಯ, ಡಿಕೆಶಿ, ಖಂಡ್ರೆಯವರನ್ನು ವಶಕ್ಕೆ ಪಡೆದ ಪೊಲೀಸರು | Janata news
ಬೆಂಗಳೂರು : ಕೊರೋನಾ ಸೂತಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಬಿಜೆಪಿಯಿಂದ ಪ್ರಜಾಪ್ರಭುತ್ವ, ಸಂವಿಧಾನಗಳು ನಾಶವಾಗುತ್ತಿವೆ ಎಂದು ಆರೋಪಿಸಿದ ಅವರು, ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷವಾಕ್ಯ ಕೂಗುತ್ತ ಮೆರವಣಿಗೆ ಸಾಗಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಸೇರಿ ಹಲವು ನಾಯಕರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದರು. ಅಲ್ಲಿಯೇ ಧರಣಿ ಆರಂಭಿಸಿದ ಮುಖಂಡರನ್ನು ಪೊಲೀಸರು ಬಂಧಿಸಿ, ಅಶೋಕ ನಗರ ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಬಿಡುಗಡೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಲು ಸಂಜೆ 4 ಗಂಟೆಗೆ ಸಮಯ ನಿಗದಿ ಆಗಿತ್ತು. ಆದರೆ ಪೊಲೀಸರು 4 ಗಂಟೆ ನಂತರ ಮುಖಂಡರನ್ನು ಬಿಡುಗಡೆ ಮಾಡಿದ್ದರಿಂದ ಇದು ಸಾಧ್ಯವಾಗಲಿಲ್ಲ.
ಬಿಜೆಪಿಯವರು ಮಧ್ಯಪ್ರದೇಶ ಸರ್ಕಾರವನ್ನು ಬೀಳಿಸಲು ರಾಜ್ಯಪಾಲರನ್ನು ಬಳಸಿಕೊಂಡರು. ಇದೀಗ ರಾಜಸ್ಥಾನ ಸರ್ಕಾರವನ್ನೂ ಕೆಡವಲು ಯತ್ನಿಸುತ್ತಿದ್ದಾರೆ. ಅದನ್ನೆಲ್ಲ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಸಿಎಂ ಯಡಿಯೂರಪ್ಪ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಾಗಿಯೇ ಪೊಲೀಸರು ನಮ್ಮನ್ನು ರಾಜಭವನಕ್ಕೆ ಬಿಡುತ್ತಿಲ್ಲ. ನಾವು ಗಲಾಟೆ ಮಾಡುವುದಿಲ್ಲ ಎಂದು ಹೇಳಿದರೂ ಕೇಳುತ್ತಿಲ್ಲ ಎಂದು ಆರೋಪಿಸಿದರು.
ಬಿಐಇಸಿ ಕೊರೋನಾ ಕೇಂದ್ರ ದಲ್ಲಿ 10100 ಬೆಡ್ ಎಂದು ಸರ್ಕಾರದ ಸಚಿವರು ಹೇಳಿದ್ದರಾದರೂ ಅದೇ ಸರ್ಕಾರದ ಅಧಿಕಾರಿಗಳು 6000 ಬೆಡ್ ಎಂದು ಮಾಹಿತಿ ನೀಡಿದ್ದಾರೆ. ಇಂತಹ ವ್ಯತ್ಯಾಸವನ್ನು ವಿಪಕ್ಷ ನಾಯಕರು ಕೇಳಬಾರದೇ?.
ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ಐವರು ಸಚಿವರು ಮೊದಲು 323 ಕೋಟಿ ಖರ್ಚಾಗಿದೆ ಎಂದು ಹೇಳಿದ್ದರು. ಆ ಮೇಲೆ 2000 ಕೋಟಿ ಖರ್ಚಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮಾಸ್ಕ್ ಗಳಿಗೆ 250 ರೂ. ಸ್ಯಾನಿಟೈಸರ್ ಗಳಿಗೆ 500-600 ರೂ ಹಾಕಿದ್ದಾರೆ. ಇವರ ಹಗರಣ ಇಡೀ ದೇಶದಲ್ಲಿ ಕರ್ನಾಟಕ ಬೆತ್ತಲೆಯಾಗುವಂತೆ ಮಾಡಿದೆ.
ಕೊರೋ ಸಂದರ್ಭದಲ್ಲಿ ಕಾರ್ಮಿಕರಿಗೆ ಸರಿಯಾದ ರಕ್ಷಣೆ, ಭರವಸೆ ನೀಡಿದ್ದರೆ ಅವರು ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ. ರಾಜ್ಯದ ಅಭಿವೃದ್ಧಿ ಶೂನ್ಯ ಆಗಿದೆ.ರಾಜ್ಯದ ಖರೀದಿ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದರು.