ಕೂಲಿ ಕೆಲಸದಿಂದ ಐದು ದಿನ ರಜೆ ಪಡೆದು 625ಕ್ಕೆ 616 ಅಂಕ ಗಳಿಸಿದ ವಿದ್ಯಾರ್ಥಿ! | Janata news
ಬೆಂಗಳೂರು : ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರೋ ಬಾಲಕನೋರ್ವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಐದು ದಿನ ಮೊದಲು ಕೂಲಿ ಕೆಲಸದಿಂದ ರಜೆ ಪಡೆದು ಓದಿದ್ದ ವಿದ್ಯಾರ್ಥಿ ಮಹೇಶ್ ಬಿ. 625ಕ್ಕೆ 616 ಅಂಕ ಪಡೆದಿದ್ದಾನೆ.
ಆರು ವರ್ಷಗಳ ಹಿಂದೆ ಕೂಲಿ ಕೆಲಸ ಅರಸಿ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಹೊರಟು ಬಂದಿರುವ ಕುಟುಂಬದ ಬಾಲಕನಾಗಿರೋ ಮಹೇಶ್, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ಈ ಸಾಧನೆ ಮಾಡಿದ್ದಾನೆ.
ಮಹೇಶ್ ಮೂಲತಃ ಯಾದಗಿರಿ ಜಿಲ್ಲೆಯವರು. ತನ್ನ ತಾಯಿ ಹಾಗೂ ಇಬ್ಬರು ಸಹೋದರರೊಂದಿಗೆ ಮಹೇಶ್ ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿ ವಾಸವಾಗಿದ್ದು, ಜೀವನಭೀಮಾನಗರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ.
ಗಣಿತ ಮತ್ತು ಹಿಂದಿಯಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ಮಹೇಶ್ ಕನ್ನಡದಲ್ಲೂ 125 ಪೂರ್ಣ ಅಂಕ ಪಡೆದಿದ್ದಾನೆ. ಮಹೇಶನ ಸಾಧನೆಯನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಆತನ ಗುಡಿಸಲಿನ ಮನೆಗೆ ಭೇಟಿ ನೀಡಿದ್ದಾರೆ.
ಸುರೇಶ್ ಕುಮಾರ್ ಖುದ್ದು ಆತನ ಗುಡಿಸಲಿನ ಮನೆಗೆ ಭೇಟಿಯಾಗಿ 5000 ರೂಪಾಯಿ ನಗದು ನೀಡಿ ಅಭಿನಂದಿಸಿದರು. ಮುಂದೆ ಶಿಕ್ಷಕನಾಗುವ ಕನಸು ಕಂಡಿರುವ ಮಹೇಶ್, ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಳಿ ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ.