ಕೆ.ಜಿ ಹಳ್ಳಿ ಗಲಭೆಯ ಆರೋಪಿ ನವೀನ್ ಬಿಜೆಪಿ ಬೆಂಬಲಿಗ: ಡಿ.ಕೆ ಶಿವಕುಮಾರ್ | Janata news
ಬೆಂಗಳೂರು : ಕೆ.ಜಿ ಹಳ್ಳಿ ಘಟನೆಗೆ ಮೂಲ ಕಾರಣನಾದ ನವೀನ್ ಬಿಜೆಪಿ ಕಟ್ಟಾ ಬೆಂಬಲಿಗನಾಗಿದ್ದು, ಇಡೀ ಪ್ರಕರಣದ ಸತ್ಯಶೋಧನೆಗೆ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಆರು ಹಿರಿಯ ಸದಸ್ಯರ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಘಟನೆಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆರೋಪಿ ನವೀನ್, ಶ್ರೀನಿವಾಸ ಅವರ ಸಂಬಂಧಿಯಾಗಿದ್ದರೂ ಆತ ಮೊದಲಿನಿಂದಲೂ ಬಿಜೆಪಿಯ ಕಟ್ಟಾ ಬೆಂಬಲಿಗ. ಅವನಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಇದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಇದರ ಸತ್ಯಾಂಶ ಕಂಡುಕೊಳ್ಳಲು ಪರಮೇಶ್ವರ್ ಅವರ ನೇತೃತ್ವದಲ್ಲಿ ಮೂವರು ಮಾಜಿ ಗೃಹ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೆ.ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಬಿ.ಕೆ ಹರಿಪ್ರಸಾದ್, ಕೃಷ್ಣಭೈರೇಗೌಡ, ನಸೀರ್ ಅಹಮದ್ ಅವರು ಇದ್ದಾರೆ ಎಂದರು.
ನಿನ್ನೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಅದೇ ರೀತಿ ಒಂದು ಧರ್ಮದ ವಿಚಾರವಾಗಿ ನೀಡಿರುವ ಹೇಳಿಕೆಯನ್ನೂ ಖಂಡಿಸುತ್ತೇವೆ.
ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿರುವ ನವೀನ್ ಬಿಜೆಪಿಯ ಬೆಂಬಲಿಗ. ಆತ ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ತಾನು ಬಿಜೆಪಿಗೆ ಮತ ಹಾಕಿದ್ದು, ಈ ಬಾರಿ ಬಿಜೆಪಿ ಜಯಗಳಿಸಿದೆ ಎಂದು ಬರೆದುಕೊಂಡಿದ್ದ. ಈತ ಶಾಸಕ ಶ್ರೀನಿವಾಸ ಅವರ ಸಂಬಂಧಿಯಾದರೂ, ಅವರೊಡನೆ ರಾಜಕೀಯ ಸಂಬಂಧ ಹೊಂದಿಲ್ಲ.
ಫೇಸ್ಬುಕ್ನಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಆಗ ಪೊಲೀಸರು ಸರಿಯಾದ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ. ದೂರು ಕೊಡಲು ಬಂದಾಗಲೇ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿತ್ತು. ಯಾರು ಏನೇ ಮಾಡಿದ್ದರೂ ತಪ್ಪು, ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದವರದ್ದು, ಮನೆಗೆ ಬೆಂಕಿ ಹಚ್ಚಿದವರದ್ದು ತಪ್ಪು ಇದೆ. ನಾವು ಯಾರ ಬೆಂಬಲಕ್ಕೂ ಇಲ್ಲ. ಆದರೆ ಅಮಾಯಕರ ಆಸ್ತಿ-ಪಾಸ್ತಿ ಹಾಳಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.