ಶಾಲೆ ಕಾಂಪೌಂಡ್ ಕುಸಿದು ವ್ಯಕ್ತಿ ಸಾವು! | Janata news
ಬಳ್ಳಾರಿ : ರಸ್ತೆ ವಿಸ್ತರಣೆ ಸಲುವಾಗಿ ಸರ್ಕಾರಿ ಶಾಲೆಯ ಕಾಂಪೌಂಡ್ ಕೆಡವುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ನಗರದ ತಾಳೂರು ರಸ್ತೆಯ ಬಳಿ ನಡೆದಿದೆ.
ಮೃತಪಟ್ಟರನ್ನ ಮಹಾನಂದಿಕೊಟ್ಟಂ ನಿವಾಸಿ ಗೋವಿಂದಪ್ಪ (50) ಎಂದು ಗುರುತಿಸಲಾಗಿದೆ. ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಗೋಡೆಯ ಒಂದು ತುದಿಯನ್ನು ಬೆಳಿಗ್ಗೆ 7.30ರ ವೇಳೆಯಲ್ಲಿ ಯಂತ್ರವಾಹನದಿಂದ ಕೆಡವುತ್ತಿದ್ದಾಗ ಗೋಡೆಯ ಇನ್ನೊಂದು ತುದಿಯಲ್ಲಿ ಎಂದಿನಂತೆ ಗೋವಿಂದಪ್ಪ ಕುಳಿತಿದ್ದಾಗ ಗೋಡೆ ಏಕಾಏಕಿ ಉರುಳಿಬಿತ್ತು. ಅವರೊಂದಿಗೇ ಕುಳಿತಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದರು.
ಘಟನೆ ಬಳಿಕ ಬಲ್ಡೋಜರ್ ವಾಹನದ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.