ಧೋನಿಗೆ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ! | Janata news
ನವದೆಹಲಿ: : ಮಹೇಂದ್ರ ಸಿಂಗ್ ಧೋನಿ ಅವರು ಆಗಸ್ಟ್ 15ರಂದು ಸಂಜೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಭಾರತೀಯ ಕ್ರಿಕೆಟ್ ಗೆ ಧೋನಿ ನೀಡಿರುವ ಕೊಡುಗೆಗಾಗಿ ಪ್ರಧಾನಿ ಮೋದಿ ಎರಡು ಪುಟಗಳ ಸುದೀರ್ಘ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧೋನಿಗೆ ಪತ್ರವೊಂದನ್ನು ಬರೆದು ಬರೆದಿದ್ದಾರೆ. ಬುಧವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಪತ್ರವನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾ ಮಾಜಿ ನಾಯಕನನ್ನು ವಿಶೇಷವಾಗಿ ಸಂಬೋಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಧೋನಿ ಅವರ ಕ್ರಿಕೆಟ್ ರಂಗದ ಸಾಧನೆ ಹಾಗೂ ಭಾರತ ಮತ್ತು ವಿಶ್ವದ ಕ್ರೀಡೆಗಾಗಿ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ತಮ್ಮ ಪತ್ರದಲ್ಲಿ ಸ್ಮರಿಸಿದ್ದಾರೆ.
ಡಿಯರ್ ಮಹೇಂದ್ರ, ಆಗಸ್ಟ್ 15 ರಂದು, ನೀವು ಆಶ್ಚರ್ಯಗೊಳಿಸುವ ರೀತಿಯಲ್ಲಿ ಒಂದು ಸಣ್ಣ ವೀಡಿಯೊವನ್ನು ಹಾಕುವ ಮೂಲಕ ನಿಮ್ಮ ನಿವೃತ್ತಿಯನ್ನು ಘೋಷಿಸಿದ್ದೀರಿ. ಇದು ಇಡೀ ದೇಶದ ಚರ್ಚಾ ವಿಷಯವಾಯಿತು.
ಆದರೆ ಕಳೆದ ಒಂದೂವರೆ ದಶಕದಲ್ಲಿ ನೀವು ದೇಶಕ್ಕಾಗಿ ನೀಡಿರುವ ಸೇವೆಗೆ ಅವರು ನಿಮಗೆ ಕೃತಜ್ಞರಾಗಿರುತ್ತಾರೆ. ಅಂಕಿಅಂಶಗಳು ನಿಮ್ಮ ವೃತ್ತಿಜೀವನವನ್ನು ಮೆಲುಕು ಹಾಕುವ ಒಂದು ಮಾರ್ಗವಾಗಿದೆ. ನೀವು ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದೀರಿ.
ಕಠಿಣ ಪರಿಸ್ಥಿತಿಯಲ್ಲಿ, ತಂಡವು ನಿಮ್ಮ ಮೇಲೆ ಅವಲಂಬಿತವಾಗಿತ್ತು. ಅದನ್ನು ನಿಮ್ಮದೇ ಶೈಲಿಯಲ್ಲಿ ನಿಭಾಯಿಸಿರುವುದನ್ನು ಯಾವಾಗಲೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೀವು ಬಾರಿಸಿದ ಸಿಕ್ಸರ್ ಜನಮಾನಸದಲ್ಲಿ ಸದಾ ಇರುತ್ತದೆ ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೀವು ಸಣ್ಣ ಪಟ್ಟಣದಿಂದ ಬಂದು ದೇಶವನ್ನು ಪ್ರತಿನಿಧಿಸಿದ್ದೀರಿ. ದೇಶವನ್ನು ಹೆಮ್ಮೆ ಪಡುವಂತಹ ಅನೇಕ ಕೆಲಸಗಳನ್ನು ಮಾಡಿದ್ದೀರಿ. ನಿಮ್ಮ ಯಶಸ್ಸು ದೇಶದ ಕೋಟ್ಯಂತರ ಯುವಕರಿಗೆ ಧೈರ್ಯ ಮತ್ತು ಸ್ಫೂರ್ತಿ ನೀಡಿತು. ದೊಡ್ಡ ಶಾಲೆ, ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡದೆ ಸಣ್ಣ ನಗರದಿಂದ ಬಂದಿದ್ದರೂ, ತಮ್ಮ ಪ್ರತಿಭೆಯಿಂದ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂದು ತೋರಿಸಿದ್ಧೀರಿ ಎಂದಿದ್ದಾರೆ.
ನಿಮಗೆ ಪತ್ನಿ ಮತ್ತು ಮಗಳು ಝಿವಾ ಜತೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಗಲಿದೆ ಎಂದು ಭಾವಿಸುತ್ತೇನೆ. ಅವರ ತ್ಯಾಗ ಮತ್ತು ಬೆಂಬಲವಿಲ್ಲದೆ ಏನೂ ಸಾಧ್ಯವಿಲ್ಲ. ಅವರಿಗೂ ನನ್ನ ಶುಭಹಾರೈಕೆಗಳು.
ಮೋದಿ ಬರೆದ ಪತ್ರವನ್ನು ಸಾಮಾಜಿಕ ತಾಣ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಕಲಾವಿದ, ಸೈನಿಕ, ಕ್ರೀಡಾಳುಗಳು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ತಮ್ಮ ಪರಿಶ್ರಮ, ತ್ಯಾಗ ಮನ್ನಣೆಗೆ ಪಾತ್ರವಾಗಬೇಕು, ಎಲ್ಲರೂ ಪ್ರಶಂಸಿಸಬೇಕು ಎಂದು ಅಪೇಕ್ಷಿಸುತ್ತಾರೆ. ಮೆಚ್ಚುಗೆ ಮತ್ತು ಶುಭಾಶಯಗಳಿಗಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ.