ಪೋಸು ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ : ಸುಧಾಕರ್ಗೆ ಹೆಚ್ಡಿಕೆ ಟಾಂಗ್ | Janata news
ಬೆಂಗಳೂರು : ಆಡಿದ ಮಾತು ಬಿಟ್ಟ ಬಾಣ ಕಳೆದ ಸಮಯ ಮತ್ತು ಕೈತಪ್ಪಿ ಹೋದ ಅವಕಾಶ ಎಂದಿಗೂ ಮರಳಿ ಬಾರವು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ವ್ಯಂಗ್ಯವಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ಗೆ ಹೆಚ್ಡಿಕೆ ಟಾಂಗ್ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ?, ನಿಶಕ್ತವಾಗಿರುವ ಲಕ್ಷಣವೋ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಡಾ.ಕೆ.ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು ಪೋಸು ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ. ಕೊರೊನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದಿರೇ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಖಾರವಾಗಿ ಹೇಳಿದ್ದಾರೆ.
ಸೋಂಕಿತರು ಬೆಡ್ಗಳಿಲ್ಲದೆ, ಆ್ಯಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕೊರೊನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ ಎಂದು ವ್ಯಂಗ್ಯವಾಡಿದರು.
ಜೊತೆಗೆ ವಚನವೊಂದನ್ನು ಉಲ್ಲೇಖಿಸಿರುವ ಹೆಚ್ಡಿ ಕುಮಾರಸ್ವಾಮಿ, ನುಡಿಯಲುಬಾರದು ಕೆಟ್ಟನುಡಿಗಳ, ನಡೆಯಲುಬಾರದು ಕೆಟ್ಟನಡೆಗಳ, ನುಡಿದಡೇನು ನುಡಿಯದಿರ್ದಡೇನು?, ಹಿಡಿದವ್ರತ ಬಿಡದಿರಲು ಅದೆ, ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ - ಮುಕ್ತಾಯಕ್ಕ ಎಂದು ಬರೆದಿದ್ದಾರೆ.