ಭದ್ರಾ ನಾಲೆಗೆ ಬೊಲೆರೋ ಕಾರು ಬಿದ್ದು ಪತ್ನಿ ನೀರುಪಾಲು, ಪತಿ ಪಾರು! | Janata news
ಚಿಕ್ಕಮಗಳೂರು : ಭದ್ರಾ ಕಾಲುವೆಗೆ ಬೊಲೆರೋ ಕಾರೊಂದು ಬಿದ್ದಿದ್ದು, ಘಟನೆಯಲ್ಲಿ ಪತಿ ಅಪಾಯದಿಂದ ಪಾರಾದ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ಸಂತೋಷ್ ಜೈನ್ ಪಾರಾಗಿದ್ದು, ಪತ್ನಿ ಸರ್ವಮಂಗಳ (32) ನೀರುಪಾಲಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯಾಚರನೆ ಆರಂಭವಾಗಿದೆ.
ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸರ್ವಮಂಗಳ, ಸಂತೋಷ್ ಜೈನ್ ದಂಪತಿ ಬೊಲೆರೋ ಕಾರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಲಕ್ಕವಳ್ಳಿ ಪಟ್ಟಣ ಸಮೀಪದಲ್ಲಿರುವ ಭದ್ರಾ ಎಡದಂಡೆ ನಾಲೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದಿದೆ.
ಈ ವೇಳೆ ಸಂತೋಷ್ ಜೈನ್ ಕಾರಿನಿಂದ ಹೊರ ಬಂದು ಈಜಿ ದಡ ಸೇರಿದ್ದಾರೆ. ಆದರೆ ಸಂತೋಷ್ ಅವರ ಪತ್ನಿ ಸರ್ವಮಂಗಳ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸರ್ವ ಮಂಗಳ ಅವರ ಮೃತದೇಹವನ್ನು ಮುಳುಗು ತಜ್ಞರು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಹುಡುಕಾಟ ನಡೆಸಿ ಹೊರತಂದಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.