ನಾನು ತಪ್ಪು ಮಾಡಿದ್ರೆ ,ನಾನು ಆತ್ಮಹತ್ಯೆಗೂ ಸಿದ್ಧ : ಸಚಿವ ಸೋಮಣ್ಣ ಶಾಕಿಂಗ್ ಹೇಳಿಕೆ..! | Janata news
ಬೆಂಗಳೂರು : ಸಣ್ಣದಾಗಿ ನಡೆದುಕೊಂಡು, ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನಾನು ನೇಣು ಹಾಕಿಕೊಳ್ಳೋಕೆ ತಯಾರಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಹಾಸನದಲ್ಲಿ ಪಿಡಿಒಗಳಿಗೆ ಸಂಬಂಧಿಸಿದಂತೆ ಸೋಮಣ್ಣ ಮಾಡಿದ ಆರೋಪ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸೋಮಣ್ಣ ಅವರು ಈ ಸ್ಪಷ್ಟನೆ ನೀಡಿದರು.
ಬಡವರಿಗಾಗಿ ಶಾಸಕರು ನೀಡಿರುವ ಸಲಹೆಯನ್ನು ಸ್ವೀಕರಿಸಬೇಕು. ಸಲಹೆಗಳನ್ನು ನಾನು ಕಾರ್ಯ ರೂಪಕ್ಕೆ ತರಬೇಕು. ಇಲ್ಲವೆಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ ಎಂದರು. ಕೆಲವು ಪಿಡಿಒಗಳು ರಾಕ್ಷಸ ಪ್ರವೃತ್ತಿ ಉಳ್ಳವರು ಎಂದು ಹೇಳಿರುವ ಹೇಳಿಕೆಗೆ ಈಗಲೂ ಬದ್ಧ.
ಪಿಡಿಓಗಳು ಮಾಡಿರುವ ತಪ್ಪುಗಳಿವು. ಪಿಡಿಓಗಳು ಹೇಳಿದ್ದು ಎಲ್ಲವೂ ಸರಿ ಇರೋದಿಲ್ಲ. ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಇರ್ತಾರೆ ಎಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅದರಲ್ಲಿ ಏನ್ ತಪ್ಪಿದೆ ಎಂದು ಸಿಎಂ ಕೇಳಿದ್ರು. ಪಿಡಿಓಗಳು ಎಲ್ಲರನ್ನೂ ರಾಕ್ಷಸರು ಅಂತ ಹೇಳಿಲ್ಲ. ಯಾವ ಪಿಡಿಒಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರನ್ನು ಕುರಿತು ಹೇಳಿದ್ದೇನೆ.
ಕೆಲವು ಪಿಡಿಓಗಳು ಪ್ರತಿಭಟನೆ ಮಾಡ್ತಾರೋ ಮಾಡಿಕೊಳ್ಳಲಿ, ನನಗೆ ತೊಂದ್ರೆ ಇಲ್ಲ. ಎಲ್ಲವೂ ಸರಿ ಇರಬೇಕು ಅನ್ನೋದು ನನ್ನ ಉದ್ದೇಶ. ದನದ ಕೊಟ್ಟಿಗೆ ಕಟ್ಟಿಸೋಕೆ, ಮತ್ತೇನೊ ಮಾಡೋಕೆ ಹಣ ಕೊಟ್ರೆ ಹೇಗೆ?. ನನಗೆ ಅರ್ಹ ಫಲಾನುಭವಿಗಳಿಗೆ ಮನೆ ಸಿಗಬೇಕು ಅಷ್ಟೇ. ನ್ಯೂನತೆಗಳು ಸರಿಯಾಗಬೇಕು.
ಹೇಳಿಕೆಯಿಂದ ಗೌರವದಿಂದ ಕೆಲಸ ಮಾಡುವ ಪಿಡಿಒಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು. ಬಡವರ ಮನೆಗಳ ಹಂಚಿಕೆ ವಿಚಾರದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಅಕ್ರಮವಾಗಿದೆ ಎಂಬುದರ ಪುಸ್ತಕ ಸಿದ್ಧಪಡಿಸಲಾಗುತ್ತಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ವಿವಿಧ ಇಲಾಖೆಗಳ ಮೇಲೆ ಅವಲಂಬಿತವಾಗಿ ಕೆಲಸ ಮಾಡಬೇಕಾಗಿದೆ. ನಾನು ಮನೆ ಹಂಚಿಕೆಗಳ ವಿಚಾರದಲ್ಲಿ ತಪ್ಪು ಮಾಡಬೇಡಿ ಎಂದಷ್ಟೇ ಹೇಳಿದ್ದೇನೆ ಎಂದರು. 5.40 ಲಕ್ಷ ಮನೆಗಳನ್ನು ನೀಡುತ್ತಿದ್ದೇವೆ. ಈ ಕೆಲಸ ಪಿಡಿಒಗಳು ಮಾಡಬೇಕಿದೆ. ಬಹಳಷ್ಟು ಮಂದಿ ಪಿಡಿಒಗಳಲ್ಲಿ ಪಾರದರ್ಶಕತೆ ಇರುವುದಿಲ್ಲ. ಹೀಗಾಗಿ ಆ ಹೇಳಿಕೆಯನ್ನು ನೀಡಿದ್ದೇ ಹೊರತು ಎಲ್ಲರನ್ನು ಕುರಿತು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.