ಉಪ ಮುಖ್ಯಮಂತ್ರಿ ಮಾಡುವಂತೆ ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು! | Janata news
ಯಾದಗಿರಿ : ನನ್ನನ್ನು ಕರ್ನಾಟಕದ ಉಪಮುಖ್ಯಮಂತ್ರಿಯನ್ನಾಗಿ ಮಾಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದು ದೇವರ ಮೊರೆಹೋಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆಯ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಹೀಗಾಗಿ ಹಲವು ನಾಯಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಡಿಸಿಎಂ ಸ್ಥಾನವನ್ನು ತಾವು ಪಡೆಯಲು ಈಗ ದೇವರ ಮೊರೆ ಹೋಗಿದ್ದಾರೆ. ಶಕ್ತಿ ದೇವತೆಯಾದ ಗಡೇ ದುರ್ಗಾದೇವಿಯ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಯು ಶಕ್ತಿ ದೇವತೆಯಾಗಿದ್ದು ದೇವಿಯಗೆ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರೆ ಒಳಿತಾಗಿದ ನಿದರ್ಶನಗಳು ಇವೆ. ಹೀಗಾಗಿ ಸಚಿವ ಬಿ.ಶ್ರೀರಾಮುಲು ಅವರು ದೇವಿಯ ಅರ್ಚಕ ಮರಿಸ್ವಾಮಿಯವರ ಸೂಚನೆಯಂತೆ ಇಂದು ಗಡೇ ದುರ್ಗಾದೇವಿ ಮಂದಿರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದು ತಮ್ಮ ಮನದಾಳದ ಬಯಕೆಯನ್ನು ದೇವಿಯ ಮುಂದೆ ಇಟ್ಟಿದ್ದಾರೆ. ತಮ್ಮ ಕನಸನ್ನು ಬರೆದ ಪತ್ರವನ್ನು ದೇವಿಯ ಪಾದದ ಮುಂದೆ ಇಟ್ಟು ಬೇಡಿಕೊಂಡಿದ್ದಾರೆ ಎನ್ನಲಾಗಿದೆ.
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇವರು ದೇವಾಲಯಕ್ಕೆ ಭೇಟಿ ಕೊಟ್ಟು ದೇವಿಯ ದರ್ಶನ ಪಡೆದು ನಂತರ ಅರ್ಚಕರ ಅನುಮತಿ ಪಡೆದು ದೇವಿಯ ಗರ್ಭಗುಡಿಯೊಳಗೆ ಹೋಗಿದ್ದಾರೆ, ಅಲ್ಲಿ ತಾವು ಬರೆದಿರುವ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಅಂದು ಸಹ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ. ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನೋದು ಭಕ್ತರ ನಂಬಿಕೆ. ಈ ಭಾಗದಲ್ಲಿ ಈ ದೇವಿಯ ಬಗ್ಗೆ ಅಪಾರ ನಂಬಿಕೆಯಿದೆ. ಈ ದೇವಿಯ ಬಳಿ ಬೇಡಿಕೊಂಡರೆ, ಕೇಳಿದ್ದನ್ನೆಲ್ಲ ದೇವಿ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.