ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ : ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು | Janata news
ಮೈಸೂರು : ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರವಿ ನಾಯಕ ಅವರ ಪುತ್ರ ರೋಹಿತ್ (2), ಅಂಬರೀಷ್ ನಾಯಕ ಅವರ ಪುತ್ರಿ ಕಾವೇರಿ (2) ಹಾಗೂ ರಾಮ ನಾಯಕ ಅವರ ಪುತ್ರ ಸಂಜಯ್ (4) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.
ಅಂಕನಹಳ್ಳಿ ಗ್ರಾಮದ ಪಟೇಲ್ ವೆಂಕಟೇಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನಿನ್ನೆ ಈ ದುರ್ಘಟನೆ ನಡೆದಿದೆ. ಜಮೀನಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಕೃಷಿ ಹೊಂಡಕ್ಕೆ ಬಿದ್ದು ಈ ಮಕ್ಕಳು ಮೃತಪಟ್ಟಿದ್ದಾರೆ.
ಆಟವಾಡುತ್ತಿದ್ದ ಮಕ್ಕಳು, ಟೆಂಟ್ ಹಿಂಭಾಗದಲ್ಲಿ 4ರಿಂದ 5 ಅಡಿಯಷ್ಟು ಆಳವಿದ್ದ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ. ಕೂಲಿ ಕೆಲಸದಿಂದ ವಾಪಸ್ಸಾದ ಪೋಷಕರು ಮಕ್ಕಳು ಕಾಣುತ್ತಿಲ್ಲ ಎಂದು ಹುಡುಕತೊಡಗಿದಾಗ, ಸಂಜೆ ನಾಲ್ಕೂವರೆ ವೇಳೆಗೆ ಮಕ್ಕಳ ದೇಹಗಳು ಹೊಂಡದಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಕ್ಕಳ ದೇಹವನ್ನು ಬನ್ನೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.