ಮಂಗಳೂರಿನಿಂದ ಹೊರಟ ಗ್ಯಾಸ್ ತುಂಬಿದ ಟ್ಯಾಂಕರ್ ಕುಮಟಾ ಬಳಿ ಪಲ್ಟಿ: ರಾಷ್ಟೀಯ ಹೆದ್ದಾರಿ ಬಂದ್ | Janata news
ಕುಮಟಾ : ರಾಜ್ಯ ಕರಾವಳಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣ ಸಮೀಪದ ರಾಷ್ಟೀಯ ಹೆದ್ದಾರಿಯಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಇಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮಂಗಳೂರಿನಲ್ಲಿರುವ ಎಂ.ಆರ್.ಪಿ.ಎಲ್.ನಿಂದ ಗ್ಯಾಸ್ ತುಂಬಿಸಿಕೊಂಡು ಕುಮಟಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಬೇಕಿದ್ದ ಟ್ಯಾಂಕರ್, ಹಂದಿಗೋಣ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ನೆಲಕ್ಕೆ ಉರುಳಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲವಾದರೂ, ಗ್ಯಾಸ್ ತುಂಬಿದ ಟ್ಯಾಂಕರ್ ರಸ್ತೆಯಲ್ಲಿ ಉರುಳಿದ ಪರಿಣಾಮದಿಂದ ಗ್ಯಾಸ್ ಸೋರಿಕೆಯಾಗುವ ಸಾದ್ಯತೆಗಳಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೋಳ್ಳುತ್ತಿದ್ದಾರೆ.
ಈ ಮಾರ್ಗದಲ್ಲಿ ಸಾಗುವ ಎಲ್ಲಾ ವಾಹನಗಳನ್ನು ಮಾರ್ಗ ಬದಲಿಸಿ ಹೊನ್ನಾವರದಿಂದ ಚಂದಾವರ ಮಾರ್ಗವಾಗಿ ಕುಮಟಾಗೆ ಕಳುಹಿಸಲಾಗುತ್ತಿದೆ, ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಕುಮಟಾ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಸಂದರ್ಭದಲ್ಲಿ ಸ್ಪೋಟ ಸಂಭವಿಸಿ ಭಾರಿ ಸಾವುನೋವು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.